ಹಾಸನ: ನಗರದ ಮೊದಲ ಮಹಿಳಾ ಮೇಯರ್ ಹೇಮಲತಾ ಕಮಲ್ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ಪಾಲಿಕೆಯ ವಿಶೇಷ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದ ಸದಸ್ಯರು ಗದ್ದಲ ಆರಂಭಿಸಿದರು. ಈ ವೇಳೆ ಮೇಯರ್ ಹೇಮಲತಾ ಸದಸ್ಯರನ್ನು ನಿಯಂತ್ರಿಸಲು ಹರಸಾಹಸ ಮಾಡುವಂತಾಯಿತು.
ನಿಗದಿಯಂತೆ ಸಭೆ ಆರಂಭವಾಗುತ್ತಿದ್ದಂತೆ, ಈ ಹಿಂದೆ ನಡೆದ ಸಭಾ ನಡಾವಳಿ ಬಗ್ಗೆ ಸದಸ್ಯರು ಚರ್ಚೆ ನಡೆಸಲು ಮುಂದಾದರು. ಈ ಹಿಂದಿನ ಸಭೆಯಲ್ಲಿ ನಡಾವಳಿಗಳ ಬಗ್ಗೆ ಚರ್ಚೆ ಬೇಡ. ಕೇವಲ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸುವಂತೆ ವಿಶೇಷ ಸಭೆಯಲ್ಲಿ ಅವಕಾಶ ನೀಡಲಾಗಿದೆ. ಆ ವಿಚಾರಗಳ ಬಗ್ಗೆ ಮಾತ್ರ ಚರ್ಚೆ ಮಾಡುವಂತೆ ಮೇಯರ್ ಸದಸ್ಯರಿಗೆ ಮನವರಿಕೆ ಮಾಡಿದರು.
ಬಳಿಕ ಸಭೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಆಗಬೇಕಾದ ಪ್ರಮುಖ ಕೆಲಸಗಳ ಕುರಿತು ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಆಯುಕ್ತ ಕೃಷ್ಣಮೂರ್ತಿ, ಸದಸ್ಯರು, ಪಾಲಿಕೆಯ ಎಂಜಿನಿಯರ್, ಅಧಿಕಾರಿಗಳು ಹಾಜರಿದ್ದರು.
ಪೌರಕಾರ್ಮಿಕರಿಗೆ ಉಡುಗೊರೆ:
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶಾಸಕ ಸ್ವರೂಪ್ ಪ್ರಕಾಶ್, ಪೌರಕಾರ್ಮಿಕರಿಗೆ ಹೊಸ ಬಟ್ಟೆಗಳ ಕೊಡುಗೆ ವಿತರಿಸಿದರು.
ನಂತರ ಮಾತನಾಡಿದ ಅವರು, ನಗರದ ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಪಾತ್ರ ಪ್ರಮುಖವಾದದ್ದು. ಅವರನ್ನು ಇಂತಹ ಸಂದರ್ಭದಲ್ಲಿ ಗುರುತಿಸಿ ಬಾಗಿನ ಸೇರಿದಂತೆ ಉಡುಗೊರೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಮೇಯರ್ ಹೇಮಲತಾ ಕಮಲ್ ಕುಮಾರ್, ಸದಸ್ಯರು, ಅಧಿಕಾರಿಗಳು, ಪೌರಕಾರ್ಮಿಕರಿಗೆ ಬಾಗಿನ ವಿತರಿಸಿ ಹಬ್ಬಕ್ಕೆ ಶುಭಾಶಯ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.