ಹಾಸನ: ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತು ಜಾಗೃತಿ ಉಂಟು ಮಾಡಲು ರಾಜ್ಯದ 13 ಜಿಲ್ಲೆಗಳಲ್ಲಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಹಾಸನ ಜಿಲ್ಲೆಯಾದ್ಯಂತ ಅರಿವಿನ ಜಾಥಾ ಮುಂತಾದ ಕಾರ್ಯಕ್ರಮಗಳ ಮೂಲಕ 2026ರ ಮಾರ್ಚ್ 8ರಂದು ಬೃಹತ್ ಸಮಾವೇಶ ನಡೆಸಲು ಚಿಂತನೆ ನಡೆದಿದೆ ಎಂದು ಒಕ್ಕೂಟದ ಡಾ.ಎಚ್.ಎಸ್. ಅನುಪಮಾ ತಿಳಿಸಿದರು.
ನಗರದ ರೆಡ್ ಕ್ರಾಸ್ ಭವನದಲ್ಲಿ ಏರ್ಪಡಿಸಲಾಗಿದ್ದ ಒಕ್ಕೂಟದ ಮೊದಲ ಸಭೆಯಲ್ಲಿ ಮಾತನಾಡಿದ ಅವರು, 2013 ರಲ್ಲಿ ಮಂಗಳೂರಿನಲ್ಲಿ ಆರಂಭವಾದ ಒಕ್ಕೂಟವು ಮೈಸೂರು, ಬೆಂಗಳೂರು, ವಿಜಯಪುರ, ಕೊಪ್ಪಳ, ಶಿವಮೊಗ್ಗ, ಧಾರವಾಡ, ಮಂಡ್ಯ, ಕೋಲಾರ, ಕಲಬುರ್ಗಿ, ತುಮಕೂರು, ಉಡುಪಿ, ವಿಜಯಪುರ ಜಿಲ್ಲೆಯಲ್ಲಿ ಅರಿವಿನ ಜಾಥಾ ಮುಂತಾದ ಕಾರ್ಯಕ್ರಮಗಳೊಂದಿಗೆ ಜಿಲ್ಲಾ ಮಟ್ಟದ ಸಮಾವೇಶ ನಡೆಸಿದೆ ಎಂದರು.
14ನೇ ಜಿಲ್ಲೆಯಾಗಿ ಹಾಸನವನ್ನು ಆಯ್ಕೆ ಮಾಡಿಕೊಂಡಿದ್ದು, ರಾಜ್ಯದ ಮಹಿಳೆ ಮತ್ತು ಮಕ್ಕಳ ಸಮಸ್ಯೆಗಳಲ್ಲದೇ ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಗಮನಹರಿಸಲಾಗುವುದು ಎಂದು ವಿವರಿಸಿದರು.
ವಾಣಿ ಪೆರಿಯೋಡಿ ಮಾತನಾಡಿ, ಯುವಜನರ ಜೊತೆ ಒಡನಾಟ ಮತ್ತು ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಗುವುದು. ಒಕ್ಕೂಟದ ಕಡೆಯಿಂದ ಬೋಧನೆ, ಉಪದೇಶ ಇರುವುದಿಲ್ಲ ಎಂದರು.
ಮಹಿಳೆ ಮತ್ತು ಮಕ್ಕಳು ಸೇರಿ ಕೌದಿ ಹೊಲೆಯುವ ಒಂದು ವಿಶಿಷ್ಟ ಕಾರ್ಯಕ್ರಮ ಇದೆ. ಕೌದಿ ಹೊಲೆಯುವ ಕೆಲಸದಲ್ಲಿ ತನ್ಮಯತೆ, ಸುಖ– ದುಃಖ ಹಂಚಿಕೆ, ಕವನ, ಕಥೆ ವಾಚನ ಎಲ್ಲ ನಡೆಯುತ್ತದೆ. ವರ್ಷದಲ್ಲಿ ಒಮ್ಮೆ ಅಧ್ಯಯನ ಶಿಬಿರ ನಡೆಯಲಿದೆ. ಜಾಗತಿಕ ವಿದ್ಯಮಾನಗಳಿಂದ ಹಿಡಿದು ಸ್ಥಳೀಯ ಸಮಸ್ಯೆಗಳ ಕುರಿತು ವಿಚಾರ ಮಂಡನೆ ಸಂವಾದ ನಡೆಯಲಿದೆ. ಮಾರ್ಚ್ 7, 8 ಅಥವಾ 8, 9 ರಂದು ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗುವುದು ಹೇಳಿದರು.
ಟಿ.ಎಲ್. ರೇಖಾಂಬ ಮಾತನಾಡಿ, ಪ್ರೀತಿ ಮತ್ತು ಧೈರ್ಯವೇ ಒಕ್ಕೂಟದ ಸದಸ್ಯತ್ವ ಪಡೆಯಲು ಬೇಕಾದ ಅರ್ಹತೆ. ಒಕ್ಕೂಟದ ವೆಬ್ಸೈಟ್, ಯೂಟ್ಯೂಬ್ ಚಾನೆಲ್ ಕೂಡ ಇದೆ ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಅರಿವಿನ ಜಾಥಾ ನಡೆಸಿದ ತಂಡದ ಪ್ರಮುಖರಾದ ನಸರಿನ್, ಮೇಘನ, ಆಶಾ, ಬಾನು ತರೀಕೆರೆ, ಎಂ.ಕೆ. ಸಹೇಲ್, ಅನುಭವಗಳನ್ನು ಹಂಚಿಕೊಂಡರು. ಒಕ್ಕೂಟದ ಆಂದೋಲನವನ್ನು ಮುನ್ನಡೆಸುವ ಆಶಯದೊಂದಿಗೆ ಹೊಸಪೇಟೆಯಿಂದ ಹಾಸನಕ್ಕೆ ಒಕ್ಕೂಟದ ತಂಡ ನೀಡಿದ ಗಿಡಗಳನ್ನು ತಂದಿರುವ ಜೀವನಾಧಾರಾದ ಹೇಮಾ ತಮ್ಮ ಖುಷಿ ವ್ಯಕ್ತಪಡಿಸಿದರು.
ಸಬಿಹಾ ಭೂಮಿಗೌಡ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಮುಖ್ಯವಾಗಿ ಕೈಗೆತ್ತಿಕೊಳ್ಳಬೇಕಾಗಿರುವ ವಿಷಯಗಳ ಪಟ್ಟಿ ಮಾಡಲು ಸಲಹೆ ಮಾಡಿದರು. ಕಲಾವತಿ ಮಧುಸೂದನ್, ಸಿ.ಸೌಭಾಗ್ಯ, ಮಮತಾ ರಾಣಿ, ಧರ್ಮೇಶ್, ನವೀನ್, ಶಾಡ್ರಾಕ್, ಸುವರ್ಣ ಶಿವಪ್ರಸಾದ್, ಕೆ.ಜಿ. ಕವಿತಾ, ಜಿಲ್ಲೆಯ ಪರವಾಗಿ ಮಾಡಬಹುದಾದ ಕೆಲಸಗಳ ಬಗ್ಗೆ ತಿಳಿಸಿದರು.
ರೂಪ ಹಾಸನ, ರಾಜ್ಯದ ಮಹಿಳೆಯರು ಹಾಗೂ ಮಕ್ಕಳು ಅನುಭವಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಅಂಕಿ ಅಂಶಗಳ ಮೂಲಕ ವಿವರಿಸಿದರು. ಪ್ರತಿವರ್ಷ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಗಳನ್ನು ಬಿಟ್ಟು ಆಚೆ ಬರುತ್ತಿರುವುದು ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಮುಖ್ಯ ಕಾರಣ ಎಂದು ತಿಳಿಸಿದರು.
ಸಾವಿರ ಸಾವಿರ ಹೆಣ್ಣು ಮಕ್ಕಳು ಕಣ್ಮರೆಯಾಗಿ ಬಲವಂತದಿಂದ ವೇಶ್ಯಾಗೃಹ ಸೇರ್ಪಡೆ ಆಗುತ್ತಿರುವುದನ್ನು ತಪ್ಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಜಾಗೃತ ದಳಗಳನ್ನು ಚುರುಕುಗೊಳಿಸಬೇಕಾಗಿದೆ ಎಂದೂ ಹೇಳಿದರು.
ಜುಲೈ 27ರಂದು ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಿವಿನ ಪಯಣದ ಪ್ರಸ್ತುತಿ ಕಾರ್ಯಕ್ರಮ ಏರ್ಪಡಿಸುವ ಕುರಿತು ಸಭೆ ನಿರ್ಧರಿಸಿತು. ಅರಿವಿನ ಪಯಣಕ್ಕೆ ಸ್ಥಳೀಯ ತಂಡಗಳಿಗೆ ತರಬೇತಿ ನೀಡುವುದು, ಅಧ್ಯಯನ ಶಿಬಿರ ಏರ್ಪಡಿಸುವುದು, ಶಾಲೆ ಕಾಲೇಜುಗಳಿಗೆ ಭೇಟಿ ನೀಡುವುದು, ತಾಲ್ಲೂಕು ಮಟ್ಟದ ಒಕ್ಕೂಟದ ಘಟಕಗಳನ್ನು ರೂಢಿಸುವುದು ಮುಂತಾದ ಕಾರ್ಯಕ್ರಮ ನಡೆಸುವ ಬಗ್ಗೆ ನಿರ್ಧರಿಸಲಾಯಿತು.
ಸಬಿತಾ ಬನ್ನಾಡಿ, ಗೌರಿ ಬೆಂಗಳೂರು, ಸುಮ ನಾನೆಟ್ಕರ್, ಲಿನೆಟ್ ಡಿಸಿಲ್ಟಾ, ಡಾ. ಸಾವಿತ್ರಿ, ಆರ್. ಸುನಂದಮ್ಮ, ಲೀಲಾವತಿ, ಕೆ.ಜಿ. ಕವಿತಾ, ಗೀತಾ, ಶಾಂತಾ ಅತ್ನಿ, ಕಲಾವತಿ ಮಧುಸೂದನ್ ಮುಂತಾದವರು ಪಾಲ್ಗೊಂಡಿದ್ದರು. ಸುನಂದಾ ಜಯರಾಮ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.