ADVERTISEMENT

ನೋವು ಮರೆಯಲು ಪುಸ್ತಕ ಸಹಕಾರಿ: ಗಿರೀಶ್ ರಾವ್ ಹತ್ವಾರ್

ಹಾಸನ ಲಿಟ್ರೇಚರ್ ಫೆಸ್ಟಿವಲ್‌–ಮಕ್ಕಳ ಸಾಹಿತ್ಯೋತ್ಸವ ಉದ್ಘಾಟಿಸಿದ ಜೋಗಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 5:07 IST
Last Updated 1 ಮಾರ್ಚ್ 2026, 5:07 IST
ಹಾಸನದ ವಿಜಯ ಶಾಲೆಯಲ್ಲಿ ಶನಿವಾರ ಆರಂಭವಾದ ಹಾಸನ ಲಿಟ್ರೇಚರ್‌ ಫೆಸ್ಟಿವಲ್–ಮಕ್ಕಳ ಸಾಹಿತ್ಯೋತ್ಸವವನ್ನು ಜೋಗಿ ಉದ್ಘಾಟಿಸಿದರು 
ಹಾಸನದ ವಿಜಯ ಶಾಲೆಯಲ್ಲಿ ಶನಿವಾರ ಆರಂಭವಾದ ಹಾಸನ ಲಿಟ್ರೇಚರ್‌ ಫೆಸ್ಟಿವಲ್–ಮಕ್ಕಳ ಸಾಹಿತ್ಯೋತ್ಸವವನ್ನು ಜೋಗಿ ಉದ್ಘಾಟಿಸಿದರು    

ಹಾಸನ: ಪ್ರತಿಯೊಬ್ಬರ ಬದುಕಿನಲ್ಲಿ ಪುಸ್ತಕ ಮಹತ್ವದ್ದಾಗಿದ್ದು, ಮನಸ್ಸಿನ ನೋವುಗಳನ್ನು ಮರೆಯಲು ಪುಸ್ತಕ ನೆರವಾಗುತ್ತದೆ ಎಂದು ಲೇಖಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಹೇಳಿದರು.

ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ದಿ ಹಾಸನ ಲಿಟ್ರೇಚರ್ ಫೆಸ್ಟಿವಲ್ 2026 (ಇಎಚ್‌ಎಲ್‌ಎಫ್) ಮಕ್ಕಳ ಸಾಹಿತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಈಗಿನಿಂದಲೇ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮೈಸೂರು, ಬೆಂಗಳೂರಿನಲ್ಲಿ ನಡೆಯುವ ಸಾಹಿತ್ಯೋತ್ಸವ ಮಾದರಿಯಲ್ಲಿ ಹಾಸನದಲ್ಲೂ ಈ ವರ್ಷದಿಂದ ಸಾಹಿತ್ಯೋತ್ಸವ ಪ್ರಾರಂಭವಾಗಬೇಕು. ಅದಕ್ಕೆ ವಿಜಯ ಶಾಲೆ ಮುನ್ನುಡಿ ಬರೆದಿದೆ ಎಂದರು.

ADVERTISEMENT

ಜೈಪುರ ಸಾಹಿತ್ಯೋತ್ಸವ ದೇಶದ ಗಮನ ಸೆಳೆದಿದೆ. ಸಾಹಿತ್ಯ ಮಕ್ಕಳಿಂದ ಶುರುವಾಗಬೇಕು ಎನ್ನುವುದನ್ನು ಅಲ್ಲಿ ನಾನು ಕಲಿತಿದ್ದೇನೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳು ಕಥೆ, ಕವನಗಳೊಂದಿಗೆ ಹಾಜರಾಗುತ್ತಾರೆ.

ನಮಿತಾ, ವಿಲಿಯಂ, ಸಂಜಯ್ ಎಂಬುವವರು ಕೇವಲ 9 ಜನ ಪ್ರೇಕ್ಷಕರೊಂದಿಗೆ ಜೈಪುರ ಸಾಹಿತ್ಯೋತ್ಸವ ಶುರು ಮಾಡಿದರು. ಇಂದು ಐದು ಲಕ್ಷ ಜನರು ಭಾಗವಹಿಸುತ್ತಾರೆ. ಸಣ್ಣ ಆರಂಭಗಳು ನಂತರದ ದಿನಗಳಲ್ಲಿ ದೊಡ್ಡ ಫಲಿತಾಂಶ ನೀಡುತ್ತವೆ ಎಂದರು.

ನಮ್ಮ ಅರಿವಿನ ಪರಿಧೀ ಹೆಚ್ಚಬೇಕೆಂದರೆ ಓದುವುದನ್ನು ಕಲಿಯಬೇಕು. ಸಾಹಿತ್ಯ ಒಡೆದ ಹೃದಯ ಜೋಡಿಸುತ್ತದೆ. ಅದಕ್ಕೆ ಸಾಹಿತ್ಯದಲ್ಲಿ ಪರಿಹಸವಿದೆ. ಹಾಸನ ಜಿಲ್ಲೆಯವರೇ ಆದ ಎಸ್.ಎಲ್. ಭೈರಪ್ಪ, ಬುಕರ್‌ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರನ್ನು ವಿದ್ಯಾರ್ಥಿಗಳು ಪ್ರೇರಣೆಯಾಗಿ ಪಡೆಯಬೇಕು ಎಂದರು.

ಪತ್ರಕರ್ತರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಬಿ. ಮದನಗೌಡ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ, ಪುಸ್ತಕ ಓದುವ ಹವ್ಯಾಸ ಬೆಳೆಸುವ ಪುಣ್ಯದ ಕೆಲಸವನ್ನು ವಿಜಯ ಶಾಲೆಯವರು ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ವಿಜಯ ಶಾಲೆಯ ಸಂಸ್ಥಾಪಕ ನಿರ್ದೇಶಕಿ ತಾರಾ ಎಸ್. ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಮುಖ್ಯಸ್ಥೆ ಶ್ರೀಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಸುಬ್ಬಸ್ವಾಮಿ, ಪ್ರಾಂಶುಪಾಲ ಕೆ.ಎಸ್. ನಂದೀಶ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

ಸಾಹಿತ್ಯೋತ್ಸವದಲ್ಲಿ ಭಾಗವಹಿಸಿದ್ದ ಮಕ್ಕಳ ಜೊತೆ ನಂದಿತಾ ರಾವ್ ಸಂವಾದ ನಡೆಸಿದರು.
ದೇಹಕ್ಕೆ ಆಗುವ ಗಾಯವನ್ನು ವಿಜ್ಞಾನದಿಂದ ಪರಿಹರಿಸಬಹುದು. ಆದರೆ ಮನಸ್ಸಿಗೆ ಆಗುವ ಗಾಯಗಳಿಂದ ಮುಕ್ತಿ ಪಡೆಯಲು ಸಾಹಿತ್ಯ ಅತ್ಯವಶ್ಯವಾಗಿದೆ
ಗಿರೀಶ್ ರಾವ್ ಹತ್ವಾರ್ ಲೇಖಕ

ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು

ಮೊದಲ ಬಾರಿಗೆ ನಗರದಲ್ಲಿ ಹಮ್ಮಿಕೊಂಡಿರುವ ಮಕ್ಕಳ ಸಾಹಿತ್ಯೋತ್ಸವಕ್ಕೆ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿ ಮೆರುಗು ತಂದರು. ಪುಸ್ತಕ ಮಳಿಗೆ ಮಾತ್ರವಲ್ಲದೇ ಚಿತ್ರಕಲೆ ಸ್ಪರ್ಧೆ ಗೋಡೆ ಬರಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಹಿತ್ಯೋತ್ಸವದ ಕಂಪನ್ನು ಹೆಚ್ಚಿಸಿದವು. ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆದ ನಂದಿತಾ ರಾವ್ ಅವರ ಸಂವಾದ ಮಕ್ಕಳ ಬುದ್ದಿ ಶಕ್ತಿಗೆ ಸಾಣೆ ಹಿಡಿದಂತಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.