ADVERTISEMENT

ಹಾಸನ ಹಾಲು ಒಕ್ಕೂಟಕ್ಕೆ ₹5.04 ಕೋಟಿ ನಿವ್ವಳ ಲಾಭ: ಎಚ್‌.ಡಿ. ರೇವಣ್ಣ

ಒಕ್ಕೂಟದಿಂದ ಶೇ 8.58 ರಷ್ಟು ಅಧಿಕ ವಹಿವಾಟು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 1:54 IST
Last Updated 2 ಸೆಪ್ಟೆಂಬರ್ 2025, 1:54 IST
ಹಾಸನ ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ, ಶಾಸಕ ಎಚ್.ಡಿ. ರೇವಣ್ಣ ಮಾತನಾಡಿದರು
ಹಾಸನ ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ, ಶಾಸಕ ಎಚ್.ಡಿ. ರೇವಣ್ಣ ಮಾತನಾಡಿದರು   

ಹಾಸನ: ‘ಇಲ್ಲಿನ ಹಾಸನ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ 2024–25ನೇ ಸಾಲಿನಲ್ಲಿ ₹ 2,392.42 ಕೋಟಿ ವಹಿವಾಟು ನಡೆಸಿದ್ದು, ತೆರಿಗೆ ಪೂರ್ವ ₹22.29 ಕೋಟಿ ಲಾಭ ಗಳಿಸಿದೆ’ ಎಂದು ಒಕ್ಕೂಟದ ಅಧ್ಯಕ್ಷರೂ ಆದ ಶಾಸಕ ಎಚ್.ಡಿ. ರೇವಣ್ಣ ಹೇಳಿದರು.

ನಗರದ ಹಾಸನ ಹಾಲು ಒಕ್ಕೂಟದ ಆವರಣದಲ್ಲಿ ಸೋಮವಾರ ನಡೆದ ಒಕ್ಕೂಟದ 2024–25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 8.58ರಷ್ಟು ವಹಿವಾಟು ಹೆಚ್ಚಳವಾಗಿದೆ. ತೆರಿಗೆ ಪೂರ್ವ ₹ 22.29 ಕೋಟಿಯಲ್ಲಿ, ಒಕ್ಕೂಟದ ಬೈಲಾ ಪ್ರಕಾರ ಆದಾಯ ತೆರಿಗೆ, ವ್ಯಾಪಾರ ಏರಿಳಿತ ನಿಧಿ, ಮೂಲಸೌಕರ್ಯ ನಿಧಿ ಕಳೆದು ₹ 5.04 ಕೋಟಿ ನಿವ್ವಳ ಲಾಭ ಉಳಿದಿದೆ. ಬೋನಸ್ ಮತ್ತು ಲಾಭಾಂಶ ಹಾಗೂ ಇತರೆ ರೂಪದಲ್ಲಿ ಹಾಲು ಉತ್ಪಾದಕರಿಗೆ ಹಂಚಿಕೆ ಮಾಡಲಾಗಿದೆ’ ಎಂದರು.

ADVERTISEMENT

‘ಸೀಮಿತ ಮಾರುಕಟ್ಟೆ ವ್ಯವಸ್ಥೆಯಿಂದ ನಿತ್ಯ 3.5 ಲಕ್ಷದಿಂದ 4 ಲಕ್ಷ ಲೀಟರ್‌ ಹಾಲನ್ನು ಪರಿವರ್ತನೆಗಾಗಿ ಕಳಿಸಬೇಕಾಗಿದೆ. ಅದಕ್ಕಾಗಿ ಬೆಂಗಳೂರು ಮಾರುಕಟ್ಟೆ ಹಂಚಿಕೆ ಮಾಡಿಕೊಡುವ ಬಗ್ಗೆ 10 ವರ್ಷಗಳಿಂದ ಕೆಎಂಎಫ್‌ ಮತ್ತು ಸರ್ಕಾರಕ್ಕೆ ಕೋರಿಕೆ ಸಲ್ಲಿಸುತ್ತಿದ್ದು, ಈ ಬಾರಿಯೂ ಮನವಿ ಸಲ್ಲಿಸಲಾಗುವುದು’ ಎಂದರು.

‘2024–25ನೇ ಸಾಲಿಗೆ ಸಂಘಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ, ಸಂಘಗಳ ಬಿಎಂಸಿ ಕಟ್ಟಡಗಳ ನಿರ್ಮಾಣಕ್ಕೆ, ಖನಿಜ ಮಿಶ್ರಣ, ಸಾಫ್ಟ್‌ಕಿಟ್, ವೆಟ್-ಫೆನ್, ಗೋಧಾರ ಶಕ್ತಿ, ಹಾಲು ಕರೆಯುವ ಯಂತ್ರ, ಪ್ರಥಮ ಚಿಕಿತ್ಸಾ ಔಷಧಿ, ಮೇವು ಕತ್ತರಿಸುವ ಯಂತ್ರ, ರಬ್ಬರ್ ಮ್ಯಾಟ್ ಖರೀದಿ, ಲಿಂಗ ನಿರ್ಧಾರಿತ ವೀರ್ಯ ನಳಿಕೆಗೆ, ಮೇವು ಅಭಿವೃದ್ಧಿ ಚಟುವಟಿಕೆ, ಬಿಎಂಸಿ, ಎಎಂಸಿಯು ಖರೀದಿ, ಇನ್ನಿತರೆ ಚಟುವಟಿಕೆ ಸೇರಿದಂತೆ ಒಟ್ಟಾರೆ ₹ 12 ಕೋಟಿಯನ್ನು ಸಂಘಗಳಿಗೆ ಸಹಾಯಧನ ರೂಪದಲ್ಲಿ ನೀಡಲಾಗಿದೆ. ಇದೇ ರೀತಿ 2025–26ನೇ ಸಾಲಿಗೆ ಒಟ್ಟಾರೆ ₹ 25.40 ಕೋಟಿ ಸಂಘಗಳಿಗೆ ಸಹಾಯಧನ ರೂಪದಲ್ಲಿ ನೀಡಲು ಉದ್ದೇಶಿಸಲಾಗಿದೆ’ ಎಂದರು.

‘ಕೆಎಂಎಫ್ ಮಾರ್ಗಸೂಚಿಯಂತೆ ಆಡಳಿತಾತ್ಮಕ ವೆಚ್ಚವನ್ನು ಶೇ 2ರಷ್ಟು ಬಳಸಿಕೊಳ್ಳಲು ಅವಕಾಶವಿದೆ. ಬೆಂಗಳೂರು ಒಕ್ಕೂಟದ ವೆಚ್ಚ ಶೇ 4.49 ರಷ್ಟಿದ್ದು, ರಾಜ್ಯದ 16 ಹಾಲು ಒಕ್ಕೂಟದಲ್ಲಿ ಹಾಸನ ಒಕ್ಕೂಟ ಕೇವಲ ಶೇ 1.69ರಷ್ಟು ಆಡಳಿತಾತ್ಮಕ ಖರ್ಚು ಮಾಡುತ್ತಿದೆ’ ಎಂದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ನಿರ್ದೇಶಕರಾದ ನಾರಾಯಣ್, ಸತೀಶ್ ಹೊನ್ನವಳ್ಳಿ, ರಾಮಚಂದ್ರೇಗೌಡ, ಚನ್ನೇಗೌಡ, ಬಸವರಾಜ್, ಸೋನಾಲ್, ನಿಂಗರಾಜು, ಸ್ವಾಮಿಗೌಡ, ಆಶಾ, ವಸಂತಾ, ಸತೀಶ್ ಕುಮಾರ್, ಮಂಜೇಗೌಡ, ಗಂಗಣ್ಣ, ಶಿವಣ್ಣ, ವಿನಯ್ ಕುಮಾರ್, ಜಗದೀಶ್ ಹಾಜರಿದ್ದರು.

ಡೇರಿಯಲ್ಲಿ 7-8 ವರ್ಷಗಳಿಂದ ನೇಮಕಾತಿ ನಡೆದಿಲ್ಲ. 240 ಹುದ್ದೆಗಳು ಖಾಲಿ ಇದ್ದು ಇರುವ ಅಧಿಕಾರಿಗಳನ್ನೇ ಬಳಸಿಕೊಂಡು ಉತ್ತಮ ಆಡಳಿತ ನಡೆಸಲಾಗುತ್ತಿದೆ.
ಎಚ್.ಡಿ. ರೇವಣ್ಣ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಶಾಸಕ

ಮೆಗಾ ಡೇರಿ ಜನವರಿಯಲ್ಲಿ ಉದ್ಘಾಟನೆ:

‘ಕೈಗಾರಿಕಾ ಪ್ರದೇಶದಲ್ಲಿ ಸುಮಾರು ₹ 735 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಡೇರಿಯ ಶೇ 90 ರಷ್ಟು ಕಾಮಗಾರಿ ಮುಕ್ತಾಯವಾಗಿದ್ದು ಡಿಸೆಂಬರ್ ಅಥವಾ 2026 ರ ಜನವರಿಗೆ ಉದ್ಘಾಟನೆಯಾಗಲಿದೆ’ ಎಂದು ಎಚ್.ಡಿ.ರೇವಣ್ಣ ಹೇಳಿದರು. ‘ಇಲ್ಲಿ ಸುಮಾರು 15 ಲಕ್ಷ ಲೀಟರ್ ಹಾಲು ಬಳಸಿ 10 ರಿಂದ 12 ಸಿಹಿ ಪದಾರ್ಥಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುವುದು’ ಎಂದರು. ‘ಡೇರಿ ಉದ್ಘಾಟನೆಯಾದ ನಂತರ ನಿತ್ಯ 150 ರಿಂದ 200 ಸಾರ್ವಜನಿಕರು ವಿದ್ಯಾರ್ಥಿಗಳು ಡೈರಿ ವೀಕ್ಷಿಸಲು ಬರಲಿದ್ದಾರೆ. ಉದ್ಯಾನವನ್ನೂ ನಿರ್ಮಿಸಲಾಗುತ್ತಿದ್ದು ರೈಲು ಗಾಡಿ ವ್ಯವಸ್ಥೆಯೊಂದಿಗೆ ಒಕ್ಕೂಟ ಬೆಳೆದು ಬಂದ ಹಾದಿಯ ಮಾಹಿತಿ ನೀಡಲಾಗುವುದು. ಈ ಕಾಮಗಾರಿ ಸಂಬಂಧ ಕೆಎಂಎಫ್‌ಗೆ ಪ್ರಸ್ತಾವ ಸಲ್ಲಿಸಿದ್ದು ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.