ಹಾಸನ: ಕೆಲ ದಿನಗಳ ಹಿಂದಷ್ಟೇ ದೂರದ ಅಸ್ಸಾಂ ಗಡಿಯಲ್ಲಿ ಪತ್ತೆಯಾಗಿದ್ದ ತಾಲ್ಲೂಕಿನ ಚಿಕ್ಕಮಂಡಿಗನಹಳ್ಳಿ ಅಜ್ಜಿ ಪ್ರಕರಣದ ಬೆನ್ನ ಹಿಂದೆಯೇ ಅಂಥದ್ದೇ ಇನ್ನೊಂದು ಪ್ರಕರಣ ಬಯಲಾಗಿದೆ.
ತಾಲ್ಲೂಕಿನ ಕಟ್ಟಾಯ ಹೋಬಳಿ ಕಾರ್ಲೆ ಗ್ರಾಮದ ಪುಟ್ಟಸ್ವಾಮಯ್ಯ ಎಂಬುವರು ಗುವಾಹಟಿಯ ರೂಪ್ ನಗರದಲ್ಲಿ ಪತ್ತೆಯಾಗಿದ್ದಾರೆ. ವೃದ್ಧರ ಬಳಿಯಿದ್ದ ಆಧಾರ್ ಕಾರ್ಡ್ ನಿಂದ ವಿಳಾಸ ಗೊತ್ತಾಗಿದೆ.
ಪುಟ್ಟಸ್ವಾಮಯ್ಯಕಾಣೆಯಾಗಿರುವ ಬಗ್ಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಆದರೆ ಇವರಿಗೆ ಪತ್ನಿ ಮತ್ತು ಮಕ್ಕಳು ಇಲ್ಲ ಎಂಬ ವಿಚಾರ ಗೊತ್ತಾಗಿದೆ.
ಅಜ್ಜ ಕನ್ನಡದಲ್ಲಿ ಮಾತನಾಡುತ್ತಿರುವುದನ್ನು ಗಮಿಸಿದ ಪೊಲೀಸರು, ಅಸ್ಸಾಂನಲ್ಲಿ ನೆಲೆಸಿರುವ ಬೆಂಗಳೂರಿನ ಎಬಿವಿಪಿ ಕಾರ್ಯಕರ್ತ ಮಂಜುನಾಥ್ ಅವರನ್ನು ಸಂಪರ್ಕಿಸಿದ್ದಾರೆ.ಹಾಸನದವರು ಎಂದು ತಿಳಿದ ಕೂಡಲೇ, ‘ಸಂಬಂಧಿಕರು ಅಥವಾ ಪರಿಚಯಸ್ಥರು ಇದ್ದಲ್ಲಿ ತಮ್ಮನ್ನು ಸಂಪರ್ಕ ಮಾಡುವಂತೆ’ ಎಬಿವಿಪಿ ಕಾರ್ಯಕರ್ತರಾದಹರ್ಷಿತ್,ಮಂಜುನಾಥ್ ಮನವಿ ಮಾಡಿದ್ದಾರೆ.
ಊಟ, ವಸತಿ ಹಾಗೂ ಆರೈಕೆ ಇಲ್ಲದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಲತಾಸಿಲ್ ಪೊಲೀಸರು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ನಂತರ ಸದ್ಯ ವೃದ್ಧಾಶ್ರಮದಲ್ಲಿ ಇರಿಸಿದ್ದಾರೆ.
ಈ ವಿಷಯವನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದ ಹರ್ಷಿತ್, ಅಜ್ಜರಸಂಬಂಧಿಕರು, ಪರಿಚಯಸ್ಧರು ಇದ್ದರೆ ಮೊ. ನಂ. 9611078300 ಸಂಪರ್ಕಿಸುವಂತೆ ತಿಳಿಸಿದ್ದರು.
‘ಪುಟ್ಟಸ್ವಾಮಯ್ಯ ನಮ್ಮ ಊರಿನವರೇ. ಆದರೆ ಅವರಿಗೆ ಪತಿ ಇಲ್ಲ, ಮಕ್ಕಳು ಇಲ್ಲ. ಒಬ್ಬರೇ ವಾಸವಾಗಿದ್ದರು’ ಎಂದು ಕಾರ್ಲೆ ಗ್ರಾಮದ ಮಹಿಳೆಯೊಬ್ಬರುಪ್ರತಿಕ್ರಿಯಿಸಿದ್ದಾರೆ.
ಹಾಸನ ತಾಲ್ಲೂಕಿನ ಮಂಡಿಗನಹಳ್ಳಿಯಿಂದ 2016ರ ಡಿಸೆಂಬರ್ ನಿಂದ ಕಾಣೆಯಾಗಿದ್ದ ಜಯಮ್ಮ ಎಂಬುವರು ಅ. 18 ರಂದು ಅಸ್ಸಾಂ ನ ಕರೀಂಗಂಜ್ ನಲ್ಲಿ ಪತ್ತೆಯಾಗಿದ್ದರು. ಭಾಷೆ ಗೊತ್ತಿಲ್ಲದೆ ಪರದಾಡುತ್ತಿದ್ದ ಇವರನ್ನು ಗಡಿ ಭದ್ರತಾ ಪಡೆ ಯೋಧರು ರಕ್ಷಿಸಿ, ಕನ್ನಡಿಗ ಯೋಧನೊಬ್ಬನ ಸಹಾಯದಿಂದ ಬೆಂಗಳೂರು ಕಳುಹಿಸಿದ್ದರು.
ವಾರದ ಅಂತರದಲ್ಲಿ ಹಾಸನದ ಇಬ್ಬರು, ಅಸ್ಸಾಂ ನಲ್ಲಿ ಪತ್ತೆಯಾಗಿರುವುದು ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.