ಹೆತ್ತೂರು: ಆಯಾ ಕಾಲಘಟ್ಟದಲ್ಲಿ ಆಳಿದ ಪ್ರಧಾನಿಗಳು ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಈ ದೇಶ ನರೇಂದ್ರ ಮೋದಿಯಿಂದ ಮಾತ್ರ ಅಭಿವೃದ್ಧಿಯಾಗಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಸಮೀಪದ ಯಸಳೂರು ಮತ್ತು ಹೆತ್ತೂರು ಹೋಬಳಿಯ ವಿವಿಧೆಡೆ ಚುನಾವಣಾ ಪ್ರಚಾರ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.
ಮೋದಿ ಅವರು ಕೇವಲ ಪ್ರಚಾರದಲ್ಲಿ ನಿರತರಾಗಿದ್ದಾರೆ. ದೇವೇಗೌಡರ ಕುಟುಂಬ ಅಪಾರ ಹಣ ಲೂಟಿ ಮಾಡಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಮೋದಿ ಸಹ ಘಟಬಂಧನ್ ಮಾಡಿ ಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. 13 ಪಕ್ಷಗಳೊಡನೆ ಮೈತ್ರಿ ಮಾಡಿಕೊಂಡಿ ರುವುದು ಮಹಾಘಟ ಬಂಧನ್ ಅಲ್ಲವೇ ಎಂದು ಪ್ರಶ್ನಿಸಿದರು.
2014ರ ನಂತರ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳನ್ನು ಕಳೆದು ಕೊಂಡಿದೆ. 3 ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜನರು ಮೋದಿ ವಿರುದ್ಧ ಮತದಾನ ಮಾಡಿದ್ದಾರೆ ಎಂದು ಹೇಳಿದರು.
ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ‘ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯವರು ಹಣದ ಹೊಳೆಯನ್ನೇ ಇಲ್ಲಿ ಹರಿಸಿದ್ದರು. ಆದರೆ, ಗೆಲುವು ಸಾಧಿಸಲು ಆಗಲಿಲ್ಲ. ಚುನಾವಣೆ ಬಂದಾಗ ಮಾತ್ರ ಬಿಜೆಪಿಯವರಿಗೆ ಕ್ಷೇತ್ರ ಜ್ಞಾಪಕವಾಗುತ್ತದೆ’ ಎಂದು ದೂರಿದರು.
‘ಈ ಭಾಗದಲ್ಲಿ ಕಾಡಾನೆ ಸಮಸ್ಯೆ ಇದೆ. ಆನೆ ಕಾರಿಡಾರ್ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗ್ರಾಮೀಣಾಭಿವೃದ್ಧಿ, ರೈತ ಏಳಿಗೆಗೆ ಆದ್ಯತೆ ನೀಡುತ್ತೇನೆ’ ಎಂದರು.
ಕುನಿಗನಹಳ್ಳಿ, ಮಲ್ಲಾಪುರ, ಕೆಂಚಮ್ಮನ ಹೊಸಕೋಟೆ, ಚಂಗಡಿ ಹಳ್ಳಿ, ಉಚ್ಚಂಗಿ, ವನಗೂರು, ಹೆತ್ತೂರು, ವಳಲಹಳ್ಳಿಯಲ್ಲಿ ಪ್ರಚಾರ ಮಾಡಲಾಯಿತು.
ಶಾಸಕ ಎಚ್.ಕೆ. ಕುಮಾರಸ್ವಾಮಿ, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಭಾಸ್ಕರ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಲ್. ಸೋಮಶೇಖರ್, ಜಿ.ಪಂ ಸದಸ್ಯೆಯರಾದ ಉಜ್ಮಾರುಜ್ವಿ ಸುದರ್ಶನ್, ಚಂಚಲಾ ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಎ. ಜಗನ್ನಾಥ್, ಕಾಂಗ್ರೆಸ್ ತಾಲ್ಲೂಕು ಘಟಕದ ಉಪಾಧ್ಯಕ್ಷ ತುಳಸಿ ಪ್ರಸಾದ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಕೃಷ್ಣಪ್ರಸಾದ್, ಹೆತ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಜೆಡಿಎಸ್ ಮುಖಂಡರಾದ ಸಚ್ಚಿನ್ ಪ್ರಸಾದ್, ದಿವಾಕರ್, ಬಾಚಿಹಳ್ಳಿ ಪ್ರತಾಪ್, ಎಚ್.ಆರ್.ಕೃಷ್ಣಪ್ರಸಾದ್, ಪಟ್ಲ ಕುಮಾರ್, ಗೂದ್ದು ಕೌಶಿಕ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.