ಹಾಸನ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಇಲಾಖೆಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಕುಂದು ಕೊರತೆಗಳಿವೆಯಾ? ನೇರವಾಗಿ ಹಾಸನಕ್ಕೆ ಬಂದು ಅಧಿಕಾರಿಗಳೊಂದಿಗೆ ಅದನ್ನು ನಿವೇದಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೆ..?
ಹಾಗಾದರೆ ದೂರವಾಣಿ ಮೂಲಕ ಕರೆ ಮಾಡಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಇತರೆ ಅಧಿಕಾರಿಗಳೊಂದಿಗೆ ಸಮಸ್ಯೆ ಹೇಳಿಕೊಳ್ಳಿ.
ಸಿಇಒ ಜಿ. ಜಗದೀಶ್ ಅವರು ಸಾರ್ವಜನಿಕರಿಗೆ ಈ ವಿಶೇಷ ವ್ಯವಸ್ಥೆ ಮಾಡುತ್ತಿದ್ದಾರೆ. ಇನ್ನು ಮುಂದೆ ಪ್ರತಿ ತಿಂಗಳ 10ರಂದು ಬೆಳಿಗ್ಗೆ 9ರಿಂದ 10ರವರೆಗೆ “ಹಲೋ ಜಿಲ್ಲಾ ಪಂಚಾಯಿತಿ” ಫೋನ್ ಇನ್ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಅಧಿಕಾರಿಗಳು ಹಾಜರಿದ್ದು ಅಹವಾಲು ಆಲಿಸುವರು. ಇದಕ್ಕಾಗಿ ಪ್ರತ್ಯೇಕ ಫೋನ್ ಲೈನ್ ಸ್ಥಾಪನೆಯಾಗುತ್ತಿದೆ. ಪ್ರತಿಯೊಂದು ಕರೆ ದಾಖಲಾಗಲಿದ್ದು, ವಾರದೊಳಗೆ ಕೈಗೊಂಡ ಕ್ರಮದ ಬಗ್ಗೆ ಹಿಂಬರಹ ತಲುಪಲಿದೆ.
ಒಂದು ವೇಳೆ 10ನೇ ತಾರೀಖು ಸರ್ಕಾರಿ ರಜೆ ಇದ್ದಲ್ಲಿ 9 ರಂದೇ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ ಹಾಗೂ ಸಂಪರ್ಕಿಸಬೇಕಾದ ಫೇಸ್ ಬುಕ್ ಖಾತೆಗಳ ಬಗ್ಗೆ ಶೀಘ್ರದಲ್ಲೇ ವಿವರ ಒದಗಿಸಲಾಗುವುದು ಎಂದು ಜಿ. ಜಗದೀಶ್ ತಿಳಿಸಿದ್ದಾರೆ.
ಅಲ್ಲದೇ ಜಗದೀಶ್ ಅವರು ಪ್ರತಿ ತಿಂಗಳು 13 ರಿಂದ 16 ರವರೆಗೆ ತಾಲ್ಲೂಕು ಪ್ರವಾಸ ಕೈಗೊಳ್ಳಲಿದ್ದಾರೆ. ಸಾರ್ವಜನಿಕರು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿಯೂ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.