
ಹಾಸನ: ಭೂಮಿ ಸ್ವಾಧೀನ ಮಾಡಿಕೊಂಡು 15 ವರ್ಷವಾದರೂ ಇಬ್ಬರು ರೈತರಿಗೆ ಪರಿಹಾರ ನೀಡದೇ ವಿಳಂಬ ಮಾಡಿದ ಹೇಮಾವತಿ ಜಲಾಶಯ ಯೋಜನೆ ವಿಭಾಗದ ಕಚೇರಿಯ ಪೀಠೋಪಕರಣಗಳನ್ನು ವಕೀಲರ ಸಮ್ಮುಖದಲ್ಲಿ ಬುಧವಾರ ಜಪ್ತಿ ಮಾಡಲಾಯಿತು.
ಕಟ್ಟಾಯ ಹೋಬಳಿ ಬ್ಯಾಡರಹಳ್ಳಿಯ ಬಿ.ಟಿ. ಶಿವಶಂಕರ್ ಅವರ 33 ಗುಂಟೆ ಜಮೀನಿಗೆ ನ್ಯಾಯಾಲಯವು ₹ 1.09 ಕೋಟಿ ಪರಿಹಾರ ನಿಗದಿ ಮಾಡಿತ್ತು. 2009ರಲ್ಲಿ ಯಗಚಿ ನಾಲೆ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಂಡು, ಪರಿಹಾರ ನೀಡಿರಲಿಲ್ಲ. ಮತ್ತೊಂದು ಪ್ರಕರಣದಲ್ಲಿ, ದೊಡ್ಡಭೀಕನಹಳ್ಳಿಯ ಕಿತ್ತಾನೆ ಗ್ರಾಮದ ತಿಮ್ಮೇಗೌಡರ ಜಮೀನು ಸ್ವಾಧೀನಗೊಂಡ ಬಳಿಕ ನಿಗದಿಯಾಗಿದ್ದ ₹ 20 ಲಕ್ಷ ಪರಿಹಾರವನ್ನೂ ನೀಡಿರಲಿಲ್ಲ.
‘ಎರಡೂ ಕಡೆ ರೈತರ ಪರ ಅಂತಿಮ ತೀರ್ಪು ಬಂದಿದೆ. ಆದರೂ ಪರಿಹಾರವನ್ನು ನೀಡಿಲ್ಲ. ನಗರದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ಜಪ್ತಿ ವಾರಂಟ್ ಹೊರಡಿಸಿದ್ದು, ಕಚೇರಿಯ ಕಂಪ್ಯೂಟರ್ ಲ್ಯಾಪ್ಟಾಪ್, ಮೇಜು, ಕುರ್ಚಿಗಳನ್ನು ಜಪ್ತಿ ಮಾಡಲಾಯಿತು’ ಎಂದು ವಕೀಲ ಶ್ರೀಕಾಂತ್ ಹೇಳಿದರು.
‘ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಭೂಸ್ವಾಧೀನ ಪ್ರಕರಣಗಳನ್ನು 6 ತಿಂಗಳಲ್ಲಿ ಮುಗಿಸಬೇಕು. ಆದರೆ, ರೈತರು ವರ್ಷಗಟ್ಟಳೆ ಅಲೆದಾಡಬೇಕಾಗಿರುವುದು ದುರಂತ’ ಎಂದು ವಿಷಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.