ಹೆತ್ತೂರು: ಹೋಬಳಿಯ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗೂದ್ದು ಹುಡ್ರೆಮನೆ ಗ್ರಾಮದ ಬಸ್ ಪ್ರಯಾಣಿಕರ ತಂಗುದಾಣ ಶಿಥಿಲಾವಸ್ಥೆ ತಲುಪಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಹಲವು ವರ್ಷಗಳ ಹಿಂದೆ ಕಟ್ಟಲಾದ ಈ ತಂಗುದಾಣದ ಗೋಡೆಗಳು ಬಿರುಕು ಬಿಟ್ಟಿದ್ದು, ವಿಪರೀತ ಮಳೆ, ಗಾಳಿಯ ನಡುವೆ ಯಾವಾಗ ಕುಸಿದು ಬೀಳುತ್ತದೆ ಎನ್ನುವ ಆತಂಕ ಮನೆ ಮಾಡಿದೆ.
ಸುತ್ತಲಿನ ಹಲವು ಗ್ರಾಮಗಳ ವಿದ್ಯಾರ್ಥಿಗಳು, ಉದ್ಯೋಗಿಗಳು, ಸಾರ್ವಜನಿಕರು ನಿತ್ಯ ಇದೇ ತಂಗುದಾಣದಿಂದ ಹಾಸನ, ಸಕಲೇಶಪುರ, ಸೋಮವಾರ ಪೇಟೆ ಮೊದಲಾದ ಪಟ್ಟಣ, ನಗರಗಳಿಗೆ ಬಸ್ ಹಿಡಿದು ಸಾಗಬೇಕಿದೆ. ಈ ಭಾಗದಲ್ಲಿ ವರ್ಷದ ಹಲವು ತಿಂಗಳು ಮಳೆ ಬೀಳುತ್ತಿದ್ದು, ಶಿಥಿಲಾವಸ್ಥೆಯ ತಂಗುದಾಣ ದುರಸ್ತಿ ಮಾಡಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ, ಚುನಾಯಿತ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಸಂಬಂಧಿಸಿದವರು ಈಗಲಾದರೂ ಇತ್ತ ಗಮನ ಹರಿಸಿ, ಶಿಥಿಲಗೊಂಡ ಈ ಕಟ್ಟಡ ತೆರವುಗೊಳಿಸಿ ಹೊಸ ತಂಗುದಾಣ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.