ಹಿರೀಸಾವೆ: ಸೋರೆಕಾಯಿಪುರ ಗ್ರಾಮದಲ್ಲಿ ಗುರುವಾರ ಮಲ್ಲಿಗಮ್ಮ, ದುರ್ಗಮ್ಮ, ಮುನೇಶ್ವರ ಹಾಗೂ ಮಾರಿಯಮ್ಮ ದೇವಸ್ಥಾನಗಳ ಲೋಕಾರ್ಪಣೆ ವಿವಿಧ ಪೂಜೆಗಳು, ಹೋಮಗಳೊಂದಿಗೆ ನಡೆಯಿತು.
ನಸುಕಿನ 5 ಗಂಟೆಗೆ ದೇವರ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ, 9 ಗಂಟೆಗೆ ದೃಷ್ಟಿ ಪೂಜೆ ಮಾಡಿದರು. ಕೊರಕಲ್ಲಪ್ಪ ಮಠದ ಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಗೋಪುರಕ್ಕೆ ಕಳಸ ಸ್ಥಾಪಿಸಿ, ಕುಂಭಾಭಿಷೇಕ ನಡೆಯಿತು. ಹೋಮಗಳ ಪೂರ್ಣಾಹುತಿ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಸಮುದಾಯ ಭವನ ನಿರ್ಮಾಣ, ಗ್ರಾಮದ ಕೆರೆಗೆ ನೀರು ತುಂಬಿಸಲಾಗುವುದು ಎಂದರು.
ಮೆಳೇಯಮ್ಮ ಆಧ್ಯಾತ್ಮಿಕ ಕ್ಷೇತ್ರದ ಚಂದ್ರಶೇಖರ ಗುರೂಜಿ, ಕರ್ನಾಟಕ ವಿದ್ಯುತ್ ಕಾರ್ಖಾನೆಗಳ ಅಧ್ಯಕ್ಷ ಎಚ್.ಸಿ. ಲಲಿತರಾಘವ್, ಕಾಂಗ್ರೆಸ್ ಮುಖಂಡರಾದ ರಂಗೇಗೌಡ, ಗೋಪಾಲಸ್ವಾಮಿ, ಅಣತಿ ಆನಂದ್, ಪಿಎಲ್ಡಿಬಿ ಅಧ್ಯಕ್ಷ ಮಂಜುನಾಥ್, ದೇವಸ್ಥಾನ ನಿರ್ಮಾಣ ಸಮಿತಿಯ ಪ್ರಮುಖರಾದ ನಂಜುಂಡೇಗೌಡ, ಪಟ್ಟಸ್ವಾಮಿಗೌಡ, ಮತಿಘಟ್ಟ ಗ್ರಾಮ ಪಂಚಾಯಿತಿ ಸದಸ್ಯರು, ಧಾರ್ಮಿಕ ಮುಖಂಡರು ಭಾಗವಹಿಸಿದ್ದರು. ಮಂಗಳವಾರ ಮತ್ತು ಬುಧವಾರ ವಿವಿಧ ಪೂಜೆಗಳು, ಹೋಮಗಳು ಮತ್ತು ಗ್ರಾಮೀಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.