ಹಳೇಬೀಡು: ಅಕ್ರಮ ಕಟ್ಟಡ ನಿರ್ಮಾಣದಿಂದ ಬಸ್ತಿಹಳ್ಳಿಯ ಬಳಿ ಹೊಯ್ಸಳರ ಕಾಲದ ಅರಮನೆಯ ಕೋಟೆಯ ಅವಶೇಷಗಳು ಒಂದೊಂದಾಗಿಯೇ ಮರೆಯಾಗುತ್ತಿವೆ. ಈ ಬೆಳವಣಿಗೆಯಿಂದ ಇತಿಹಾಸದ ಆಮೂಲ್ಯ ಸಾಕ್ಷಿಗೆ ದುರ್ಗತಿ ಬಂದೊದಗಿದೆ.
ಬೆಣ್ಣೆಗುಡ್ಡ ತಪ್ಪಲಿನಲ್ಲಿ ಪ್ರಾಚೀನ ಕಾಲದ ತಳಪಾಯವಿದೆ. ಅದು ಹೊಯ್ಸಳರ ಕಾಲದ ಅರಮನೆಯ ತಳಪಾಯ ಎಂದು ಸ್ಥಳೀಯರು ಹೇಳುತ್ತಾರೆ. ಸುತ್ತ ಕೋಟೆಯ ಅವಶೇಷಗಳಿದ್ದು, ಪುರಾತತ್ವ ಶಾಸ್ತ್ರಜ್ಞರು ಸಹ ಅರಮನೆಯ ಸ್ಥಳ ಎಂದು ಒಪ್ಪಿಕೊಂಡಿದ್ದಾರೆ. ಕೋಟೆಯ ಕಲ್ಲು ಸಡಿಲಗೊಂಡು ಮನೆಯ ತಳಪಾಯ ಹಾಗೂ ಶೌಚಾಲಯ ಗುಂಡಿಯ ಕಟ್ಟಡ ಸೇರಿವೆ. ಕೋಟೆಯ ಸ್ಥಿತಿಗತಿಯತ್ತ ತಿರುಗಿ ನೋಡುವವರಿಲ್ಲದೇ, ಬಸ್ತಿಹಳ್ಳಿ ಬಳಿಯ ಕೋಟೆ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ವಾಗುತ್ತಿವೆ.
ಈ ಬೆಳವಣೆಗೆಯಿಂದ ಇತಿಹಾಸದ ಅವಶೇಷಗಳು ಮುಂದಿನ ಪಿಳೀಗೆಗೆ ಉಳಿಯಳಿದೆಯೇ ಎಂಬುದು ಅನುಮಾನವಾಗಿದೆ ಎಂದು ಎಂದು ಇತಿಹಾಸಕಾರ ಎಚ್.ಎಂ.ಬಸವರಾಜು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕಂದಾಯ ಇಲಾಖೆಗೆ ಒಳಪಡುವ ಕೃಷಿ ಭೂಮಿಯ ಸುತ್ತ ಅರಮನೆಯ ತಳಪಾಯ ಹಾಗೂ ಕೋಟೆ ಇದೆ. ಈ ಸ್ಥಳ ಮಹತ್ವದ್ದಾಗಿದ್ದು, ರಾಜಪ್ರಭುತ್ವದ ಪ್ರಮುಖರಾದ ಮಂತ್ರಿ, ದಂಡನಾಯಕರು ವಾಸವಾಗಿದ್ದರು ಎಂದು ಪುರಾತತ್ವ ಶಾಸ್ತ್ರಜ್ಞರು ಹೇಳುತ್ತಾರೆ. ಆನೆ ಹಾಗೂ ಕುದುರೆಗಳನ್ನು ಕಟ್ಟುತ್ತಿದ್ದ ಸ್ಥಳವೂ ಇಲ್ಲಿದೆ.
ಈ ಸ್ಥಳದಲ್ಲಿ ಸಂಪೂರ್ಣವಾಗಿ ಉತ್ಖನನ ನಡೆಸಿದರೆ ಸಾಕಷ್ಟು ಸ್ಮಾರಕದ ಅವಶೇಷಗಳು ದೊರುತ್ತವೆ. ಇತಿಹಾಸ ಅಧ್ಯಯನ ಮಾಡುವವರಿಗೆ ಹೊಯ್ಸಳರ ಕಾಲದ ಜನ ಜೀವನದ ಕುರಿತು ಸಾಕಷ್ಟು ಮಾಹಿತಿ ದೊರಕುತ್ತದೆ. ಹೊಯ್ಸಳರು ಅರಮನೆಯ ಸುರಕ್ಷತೆಗಾಗಿ ಪ್ರತ್ಯೇಕ ಕೋಟೆ ನಿರ್ಮಿಸಿದ್ದರು. ದೋರಸಮುದ್ರ(ದ್ವಾರಸಮುದ್ರ) ಇಂದಿನ ಹಳೇಬೀಡಿಗೆ ಒಂದು ಕೋಟೆ ನಿರ್ಮಿಸಿ 5 ಸ್ಥಳದಲ್ಲಿ ಪ್ರವೇಶ ದ್ವಾರ ನಿರ್ಮಿಸಿದ್ದರು. ತಮ್ಮ ಸಾಮ್ರಾಜ್ಯಕ್ಕೆ ಸೇರಿದ ಊರುಗಳಿಗೂ ಪ್ರತ್ಯೇಕ ಕೋಟೆಗಳನ್ನು ನಿರ್ಮಿಸಿದ್ದರು ಎಂಬುದು ಹಾಸನ ಶಿಲಾಶಾಸನದಲ್ಲಿ ದಾಖಲಾಗಿದೆ ಎಂದು ಪುರಾತತ್ವ ಅಧಿಕಾರಿ ಪಿ.ಅರವಝಿ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.