ಕೊಣನೂರು: ‘ಒಂದು ಬಾರಿ ನನಗೆ ಅವಕಾಶ ನೀಡಿ , ರಾಮನಾಥಪುರದ ಸುಬ್ರಹ್ಮಣ್ಯೇಶ್ವರ ಸ್ವಾಮಿ ಆಣೆಯಾಗಿ ನಿಮ್ಮ ಮನೆಯ ಕೂಲಿಕಾರನಂತೆ ಜಿಲ್ಲೆಯ ಸೇವೆ ಮಾಡುತ್ತೇನೆ’ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮನವಿಮಾಡಿದರು.
ರಾಮನಾಥಪುರ ಮತ್ತು ಕೊಣನೂರಿನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಬದಲಾವಣೆ ತರಲು, ಒಂದು ಕುಟುಂಬಕ್ಕೆ ಸೀಮಿತವಾಗಿರುವ ಅಧಿಕಾರ ಹಸ್ತಾಂತರ ಆಗಲು ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಬೇಕು. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದರು.
‘ಗೆದ್ದರೆ ಅರಕಲಗೂಡು ತಾಲ್ಲೂಕಿನ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಚುನಾವಣೆಯಲ್ಲಿ ಗೆದ್ದು ಮತ್ತೆ 5 ವರ್ಷಗಳ ನಂತರ ಮತಕೇಳುವ ಶೋಕಿಯವರಿಗೆ ಮತಹಾಕಬೇಡಿ. ಸೇವೆ ಮಾಡಲು ಸಿದ್ಧರಿರುವ ಯುವಕರಿಗೆ ಅವಕಾಶ ಕೊಡಿ ಎಂದು ಮತಯಾಚಿಸಿದರು.
ಮುಖಂಡ ಎಚ್.ಪಿ.ಶ್ರೀಧರ್ ಗೌಡ ಮಾತನಾಡಿ, ಜೆಡಿಎಸ್ ಕುಟುಂಬವನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಶ್ರೇಯಸ್ ಅವರಿಗೆ ಲೋಕಸಭಾ ಟಿಕೆಟ್ ನೀಡಿದ್ದು ಅವರನ್ನು ಗೆಲ್ಲಿಸುವ ಹೊಣೆ ನಮ್ಮ ಮೇಲಿದೆ. ಹಣ, ಬಲ ತೋಳ್ಬಲ, ಜಾತಿಮತದ ಆಧಾರದ ಮೇಲೆ ಎಂದಿಗೂ ಅಧಿಕಾರ ನಡೆಸುವುದಿಲ್ಲ. ಕಾಂಗ್ರೆಸ್ಗೆ ಮತನೀಡಿ ಎಂದರು.
ಮುಖಂಡ ಹೊನ್ನಿಕೊಪ್ಪಲು ಮಂಜೇಗೌಡ ಮಾತನಾಡಿ, ರೌಡಿಗಳಿಂದ ಹೊಡೆಸಿ ಓಟು ಹಾಕಿಸ್ತಾರೆ, ಬೂತ್ಗಳನ್ನು ಎತ್ತಿಕೊಂಡು ಹೋಗ್ತಾರೆ, ಜೆಡಿಎಸ್ ಕುಟುಂಬ ರಣರಾಕ್ಷಸರ ಕುಟುಂಬ ಎಂದು ಲೇವಡಿ ಮಾಡಿದರು. ಇವರ ದರ್ಪ, ದೌರ್ಜನ್ಯಕ್ಕೆ ಲಗಾಮು ಹಾಕಲು ಶ್ರೇಯಸ್ ಪಟೇಲ್ ರನ್ನು ಗೆಲ್ಲಿಸುವ ಅನಿವಾರ್ಯತೆ ಇದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಮುಖಂಡ ಎಂ.ಟಿ.ಕೃಷ್ಣೇಗೌಡ, ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮೊಹಮದ್ ದಾವುದ್, ವೈದ್ಯಕೀಯ ಘಟಕದ ಜಿಲ್ಲಾದ್ಯಕ್ಷ ಡಾ. ದಿನೇಶ್ ಭೈರೇಗೌಡ, ಯವ ಘಟಕದ ಅದ್ಯಕ್ಷ ರಂಜಿತ್, ಕುರುಬ ಸಂಘದ ಅಧ್ಯಕ್ಷ ಪಟೇಲ್ ಶಿವಪ್ಪ, ಮುಖಂಡರಾದ ಜಾವಗಲ್ ಮಂಜುನಾಥ್, ದಿವಾಕರ್ ಗೌಡ, ಬಿಳಗುಲಿ ರಾಮೇಗೌಡ, ವಕೀಲ ರಾಜೇಶ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.