ADVERTISEMENT

ಆಲೂರು: ಅನ್ಯ ಉದ್ದೇಶಕ್ಕೆ ನೆಲೆ ಕಳೆದುಕೊಳ್ಳುತ್ತಿರುವ ಕೆರೆಗಳು

ಕೆರೆಗಳ ಸಂರಕ್ಷಣೆಗೆ ಹೆಚ್ಚಿದ ಒತ್ತಡ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 23:30 IST
Last Updated 9 ಡಿಸೆಂಬರ್ 2022, 23:30 IST
ಹೂಳು ತುಂಬಿರುವ ಆಲೂರಿನ ಕೆರೆ.
ಹೂಳು ತುಂಬಿರುವ ಆಲೂರಿನ ಕೆರೆ.   

ಆಲೂರು: ಪಟ್ಟಣಗಳ ವ್ಯಾಪ್ತಿಗೆ ಒಳಪಡುತ್ತಿದ್ದ ಹಲವು ಕೆರೆ, ಕಟ್ಟೆಗಳನ್ನು ಮುಚ್ಚಿ ಬಸ್ ನಿಲ್ದಾಣ, ಸಾರ್ವಜನಿಕ ಪಾರ್ಕ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕೆರೆ, ಕಟ್ಟೆಗಳನ್ನು ಮುಚ್ಚಿದರೆ ಅಂತರ್ಜಲ ಕಡಿಮೆ ಆಗುವುದು ಒಂದೆಡೆಯಾದರೆ, ಮೇಲಿನ ಪ್ರದೇಶದಿಂದ ಹರಿದು ಬರುವ ನೀರು ಸಂಗ್ರಹವಾಗಲು ಅವಕಾಶವಿಲ್ಲದೆ ತೊಂದರೆಗೆ ಒಳಗಾಗುವಂತಾಗಿದೆ ಎಂದು ಇಲ್ಲಿನ ನಿವಾಸಿಗಳು ದೂರುತ್ತಿದ್ದಾರೆ.

ಪಟ್ಟಣದಲ್ಲಿ ಹಳೆ ಕೋರ್ಟ್ ಸರ್ಕಲ್ ಬಳಿ, ಹಳೆ ಆಲೂರು ರಸ್ತೆಯಂಚಿನಲ್ಲಿ ಮತ್ತು ಸುಣ್ಣದಬೀದಿ ಹಿಂಭಾಗದಲ್ಲಿ ಕೆರೆಗಳಿವೆ. ಹಳೆ ಕೋರ್ಟ್ ಸರ್ಕಲ್ ಬಳಿ ಇರುವ ಕೆರೆ ಮುಚ್ಚಿ ಪಾರ್ಕ್ ಮಾಡಲಾಗಿದೆ. ಹಳೆ ಆಲೂರು ರಸ್ತೆ, ಕಲ್ಯಾಣ ಮಂಟಪದ ಹಿಂಭಾಗದಲ್ಲಿರುವ ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದು, ನೀರು ಏರಿಯ ಅಂಚಿಗೆ ಬಂದು ನಿಂತಿದೆ.

ಪಟ್ಟಣ, ಹೌಸಿಂಗ್‌ ಬೋರ್ಡ್‌ನಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರು, ಮಳೆ ನೀರು, ಚರಂಡಿ ನೀರು ಅನ್ಯ ಮಾರ್ಗವಿಲ್ಲದೆ ಸಂಪೂರ್ಣವಾಗಿ ಈ ಮೂರು ಕೆರೆಗಳಿಗೆ ಹರಿದು ಹೋಗುತ್ತಿದೆ. ಆದರೆ ಒಂದು ಕೆರೆಯನ್ನು ಮುಚ್ಚಲಾಗಿದೆ. ಉಳಿದೆರಡು ಕೆರೆಗಳಲ್ಲಿ ಹೂಳು ತುಂಬಿದೆ.

ADVERTISEMENT

ಈ ಕೆರೆಗಳನ್ನೂ ಸಾರ್ವಜನಿಕ ಉದ್ದೇಶಗಳಿಗೆ ಬಳಸಿಕೊಳ್ಳಲು ಮುಚ್ಚಿದರೆ, ಪಟ್ಟಣ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರು ಹೊರ ಹರಿಯಲಾಗದೇ, ಇಡಿ ಪಟ್ಟಣ ರೋಗರುಜಿನಗಳ ತಾಣವಾಗುತ್ತದೆ. ಕೂಡಲೆ ಕೆರೆಗಳಲ್ಲಿ ಸಂಗ್ರಹವಾಗಿರುವ ಹೂಳೆತ್ತಿ ನೀರು ಸಂಗ್ರಹವಾಗಲು ಅವಕಾಶ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

‘ಹಿಂದಿನ ಕಾಲದಲ್ಲಿದ್ದ ಹಲವಾರು ಕೆರೆ, ಕಟ್ಟೆಗಳನ್ನು ಮುಚ್ಚಿರುವುದರಿಂದ ನೀರು ಹರಿಯಲು ತೊಂದರೆಯಾಗಿದೆ. ಈಗ ಉಳಿದಿರುವ ಕೆರೆಗಳನ್ನಾದರೂ ಸುರಕ್ಷಿತವಾಗಿ ಉಳಿಸಿಕೊಂಡು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಮನುಕುಲ ಉಳಿವಿಗೆ ತೊಂದರೆಯಾಗಲಿದೆ’ ಎಂದು ಇಲ್ಲಿನ ನಿವಾಸಿ ಸರ್ವರ್ ಪಾಷಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.