ADVERTISEMENT

ಅಲ್ಪಸಂಖ್ಯಾತರಿಗೆ ಐಟಿಐ, ಪಾಲಿಟೆಕ್ನಿಕ್‌ ಕಾಲೇಜು

ಮುಂದಿನ ವರ್ಷದಿಂದ ಆರಂಭಿಸಲು ಚಿಂತನೆ: ಸಚಿವ ಶ್ರೀಮಂತ ಬಾಳಾ ಸಾಹೇಬ ಪಾಟೀಲ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 16:03 IST
Last Updated 10 ಸೆಪ್ಟೆಂಬರ್ 2020, 16:03 IST
ಶ್ರೀಮಂತ ಬಾಳಾ ಸಾಹೇಬ ಪಾಟೀಲ
ಶ್ರೀಮಂತ ಬಾಳಾ ಸಾಹೇಬ ಪಾಟೀಲ   

ಹಾಸನ: ಅಲ್ಪಸಂಖ್ಯಾತರ ಸಮುದಾಯದ ಶೈಕ್ಷಣಿಕ ಅಭಿವೃದ್ಧಿ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಐಟಿಐ ಹಾಗೂ ವಿಭಾಗ ಮಟ್ಟದಲ್ಲಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಬಾಳಾ ಸಾಹೇಬ ಪಾಟೀಲ ಹೇಳಿದರು.

ನಗರದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಲು ಹಾಗೂ ತಾಂತ್ರಿಕ ಪರಿಣತಿ ಹೊಂದಲು ಐಟಿಐ ಕಾಲೇಜು ಹಾಗೂ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಇದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು.

ಕೇಂದ್ರ ಸರ್ಕಾರದಿಂದ ಶೇಕಡಾ 60 ಹಾಗೂ ರಾಜ್ಯದಿಂದ ಶೇಕಡಾ 40 ಅನುದಾನದೊಂದಿಗೆ ಕಾಲೇಜು
ಪ್ರಾರಂಭವಾಗಲಿದ್ದು, ಶೇಕಡಾ 75 ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಹಾಗೂ ಶೇಕಡಾ 25ರಷ್ಟು ಇತರೆ ವಿದ್ಯಾರ್ಥಿಗಳಿಗೆ ಮೀಸಲಿರಸಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲಿ ತಾಂತ್ರಿಕ ಶಿಕ್ಷಣ ಹೊಂದಿರುವ ವಿದ್ಯಾರ್ಥಿಗಳ ಕೊರತೆಯಿದೆ. ಹಾಗೂ ಇಲ್ಲಿನ ಕೈಗಾರಿಕೆಗಳಿಗೂ ಹೆಚ್ಚು ನುರಿತ ಅಭ್ಯರ್ಥಿಗಳು ಬೇಕಾಗಿದ್ದು, ಕಾಲೇಜುಗಳ ಸ್ಥಾಪನೆಯಿಂದ ಈ ಕೊರತೆ ಸರಿದೂಗಿಸಬಹುದು. ಐಟಿಐ ಮುಗಿಸಿದವರಿಗೆ ಸಾಕಷ್ಟು ಉದ್ಯೋಗಾವಕಾಶ ಇರುವುದನ್ನು ಕಾಣಬಹುದು ಎಂದು ಹೇಳಿದರು.

ADVERTISEMENT

ಲಾಕ್‌ಡೌನ್‌ ನಂತರ ಕೈಮಗ್ಗ ಹಾಗೂ ನೇಕಾರ ವಲಯದ ಹಲವು ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು. ಇವರಿಗೆ
ಸರ್ಕಾರದಿಂದ ಪ್ರತಿಯೊಂದು ಪ್ರಕರಣದಲ್ಲಿ ₹ 2 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ. ಕೈಮಗ್ಗ ವಲಯ ಆಧುನಿಕತ
ಹೊಡೆತಕ್ಕೆ ಸಿಲುಕಿ ನಷ್ಟ ಅನುಭವಿಸುತ್ತಿದೆ. ಸರ್ಕಾರದಿಂದ ಸೂಕ್ತ ಸೌಲಭ್ಯ ಹಾಗೂ ಸಹಾಯ ನೀಡುವ ನಿಟ್ಟಿನಲ್ಲಿ
ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಿ ಜವಳಿ ಹಾಗೂ ಕೈಮಗ್ಗ ಕ್ಷೇತ್ರ ಬೆಳವಣಿಗೆಗೆ ವಿಶೇಷ ಯೋಜನೆಗಳನ್ನು
ರೂಪಿಸಲಾಗುವುದು ಎಂದರು.

ಲಾಕ್‌ಡೌನ್ ಸಂದರ್ಭದಲ್ಲಿ ರಾಜ್ಯದ ಜವಳಿ ಮತ್ತು ಕೈಮಗ್ಗ ಕ್ಷೇತ್ರಗಳು ಬಹಳ ನಷ್ಟ ಅನುಭವಿಸಿದೆ. ಅವರಿಗೆ ಸರ್ಕಾರದಿಂದ ಸಹಾಯಧನ ನೀಡಲಾಗಿದ್ದು, ರಾಜ್ಯದ 50,000 ನೇಕಾರರಿಗೆ ಒಂದು ಬಾರಿಗೆ ತಲಾ ₹2,000 ಸಹಾಯಧನ ವಿತರಿಸಲಾಗಿದ್ದು, ಒಟ್ಟು ₹8.32 ಕೋಟಿ ಸಹಾಯಧನ ವಿತರಿಸಲಾಗಿದೆ. ಅಲ್ಲದೆ ಮಹಿಳಾ ನೇಕಾರರಿಗೂ ಸಹಾಯಧನ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯದ ನೇಕಾರರ ₹1 ಲಕ್ಷ ವರೆಗಿನ ಬ್ಯಾಂಕ್ ಸಾಲವನ್ನು ಸಹ ಇಲಾಖೆಯಿಂದ ಮನ್ನಾ ಮಾಡಲಾಗಿದೆ. ಇದರಿಂದ
ಶೇಕಡಾ 80 ರಷ್ಟು ನೇಕಾರರಿಗೆ ಲಾಭವಾಗಿದೆ. ಜಿಲ್ಲೆಯಲ್ಲಿ 13 ಜವಳಿ ಹಾಗೂ ಕೈಮಗ್ಗ ಕೈಗಾರಿಕೆಗಳು
ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ ಕೆಐಎಡಿಬಿಯಿಂದ ಜವಳಿ ಮೆಗಾ ಯುನಿಟ್ ಕಾರ್ಖಾನೆಯನ್ನು ತೆರೆಯುವ ನಿಟ್ಟಿನಲ್ಲಿ
ಇಲಾಖೆಯಿಂದ ಯೋಜನೆ ರೂಪಿಸುವ ಚಿಂತನೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.