ADVERTISEMENT

ಮಂಗಗಳ ಹತ್ಯೆ: 15ಕ್ಕೂ ಹೆಚ್ಚು ಮಂದಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 16:42 IST
Last Updated 1 ಆಗಸ್ಟ್ 2021, 16:42 IST

‌ಹಾಸನ: ಬೇಲೂರು ತಾಲ್ಲೂಕಿನ ಚೌಡನಹಳ್ಳಿ ಗ್ರಾಮದ ಬಳಿ ನಡೆದಿದ್ದ ಮಂಗಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸ್‌ ಮತ್ತು ಅರಣ್ಯ ಇಲಾಖೆ, ಹಾಸನ
ತಾಲ್ಲೂಕಿನ ಗ್ರಾಮವೊಂದರ 15ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದೆ.‌‌‌

ಹತ್ತಾರು ಮಂಗಗಳು ಎಲ್ಲೆಂದರಲ್ಲಿ ಓಡಾಡುತ್ತಾ ತೆಂಗು, ಅಡಿಕೆ, ಬಾಳೆ ಮೊದಲಾದ ಬೆಳೆಗಳನ್ನು ನಾಶ
ಮಾಡುತ್ತಿದ್ದವು. ಇದರಿಂದ ಬೇಸತ್ತ ಊರಿನವರು ಮಂಗಗಳ ಜೀವವನ್ನೇ ತೆಗೆದಿದ್ದಾರೆ ಎಂಬ ಮಾಹಿತಿ
ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಮಂಗಗಳ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಪೊಲೀಸ್ ತಂಡ ಐವರನ್ನು ವಶಕ್ಕೆ ಪಡೆದಿದ್ದರೆ, ಅರಣ್ಯ ಇಲಾಖೆ ತಂಡ 12ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದೆ.

ADVERTISEMENT

ಈ ಪ್ರಕರಣದಲ್ಲಿ ದಂಪತಿಯ ಕೈವಾಡ ಇದೆ ಎಂಬ ಅನುಮಾನ ದಟ್ಟವಾಗಿದೆ. ಮಂಗ ಹಿಡಿಯುವುದರಲ್ಲಿ ಪಳಗಿದ್ದ ಅರಸೀಕೆರೆಯ ದಂಪತಿಯನ್ನು ಕೆಲ ದಿನಗಳ ಹಿಂದೆ ಸಂಪರ್ಕಿಸಿದ ಗ್ರಾಮಸ್ಥರು, ‘ನಮ್ಮೂರಲ್ಲಿ ಕೋತಿ ಹಾವಳಿ ಹೆಚ್ಚಾಗಿದೆ. ಹೇಗಾದರೂ ಮಾಡಿ ಅವುಗಳಿಗೆ ಕಡಿವಾಣ ಹಾಕಬೇಕು’ ಎಂದು ಹೇಳಿದ್ದಾರೆ.

ನಂತರ ದಂಪತಿಯನ್ನು ಗ್ರಾಮಕ್ಕೆ ಕರೆಸಿಕೊಂಡಿದ್ದಾರೆ. ಮಂಗಗಳು ಸಾಮೂಹಿಕವಾಗಿ ಒಂದೆಡೆ ಬರಲಿ ಎಂಬ ಕಾರಣಕ್ಕೆ ದಂಪತಿ, ನಿತ್ಯವೂ ಅವುಗಳಿಗೆ ಆಹಾರ ಹಾಕಲು ಆರಂಭಿಸಿದ್ದಾರೆ. ದೊಡ್ಡದಾದ ಬಿದಿರು ಬುಟ್ಟಿ ತರಿಸಿ ಅದರೊಳಗೆ ಅನ್ನ ಹಾಕಲು ಆರಂಭಿಸಿದ್ದಾರೆ. ಅಲ್ಲಿಗೂ ಬರುವುದನ್ನು ಖಾತ್ರಿ ಪಡಿಸಿಕೊಂಡ ನಂತರ, ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.