ಸಕಲೇಶಪುರ: ವಿಶ್ವ ಮಾನವ ಸಂದೇಶವನ್ನು ಸಾರಿದ ಕುವೆಂಪು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೆ ಇದ್ದರೂ ಅವರ ವ್ಯಕ್ತಿತ್ವ, ಆದರ್ಶ, ಸಂದೇಶಗಳಿಗೆ ಎಂದಿಗೂ ಸಾವಿಲ್ಲ ಎಂದು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಹೇಳಿದರು.
ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಗುರುವಾರ ನಡೆದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆಯಲ್ಲಿ ಮಾತನಾಡಿದರು. ‘ಅವರ ಮಂತ್ರ ಮಾಂಗಲ್ಯದಂತೆ ನಾನು ಹಾಗೂ ನನ್ನ ಸ್ನೇಹಿತರು ವಿವಾಹ ಆದೆವು. ಮೂರು ದಶಕಗಳು ಕಳೆದರೂ ನಮ್ಮಗಳ ದಾಂಪತ್ಯ ಜೀವನ ಸುಖಮಯವಾಗಿದೆ. ಆಡಂಬರ, ಶ್ರೀಮಂತಿಕೆಯ ತೋರಿಕೆಗಾಗಿ ಅದ್ಧೂರಿ ವಿವಾಹಗಳಲ್ಲಿ ಯಾವುದೇ ರೀತಿಯ ಅರ್ಥವಿಲ್ಲ. ರಸಋಷಿ ಕುವೆಂಪು ಬಹಳ ಹಿಂದೆಯೇ ಸಮಾಜದ ಅಂಕುಡೊಂಕುಗಳು, ಮೌಢ್ಯಗಳನ್ನು ದೂರಮಾಡಿ ಮನುಷ್ಯತ್ವವನ್ನು ರೂಢಿಸಿಕೊಳ್ಳಲು ತಿಳಿಸಿದ್ದಾರೆ. ಅವರ ಪುಸ್ತಕಗಳನ್ನು ಪ್ರತಿಯೊಬ್ಬರೂ ಓದಿ ಬದುಕಿನ ಮೌಲ್ಯಗಳನ್ನು ತಿಳಿದುಕೊಳ್ಳುವುದು ಇಂದು ಅತ್ಯಗತ್ಯ ಎಂದರು.
ಉಪವಿಭಾಗಾಧಿಕಾರಿ ಡಾ. ಶೃತಿ ಮಾತನಾಡಿ, ರಾಮಾಯಣವನ್ನು ಆಧರಿಸಿದ ಮಹಾಕಾವ್ಯ ‘ಶ್ರೀ ರಾಮಾಯಣ ದರ್ಶನಂ’ ಮತ್ತು ‘ಕಾನೂರು ಹೆಗ್ಗಡತಿ’ ಕಾದಂಬರಿಗಳು ಅವರ ಅತ್ಯುತ್ತಮ ಕೃತಿಗಳು. ಕಾನೂನು ಹೆಗ್ಗಡತಿ ಕೃತಿ ಓದುತ್ತಾ ಹೋದಂತೆ 20ನೇ ಶತಮಾನದ ಮಲೆನಾಡಿನ ಬದುಕಿನ ಚಿತ್ರಣವೇ ಕಣ್ಣಮುಂದೆ ಬಂದು ನಿಲ್ಲುತ್ತದೆ. ಅವರು ಬಳಸಿರುವ ಸಾಹಿತ್ಯ, ಪದಗಳ ಬಳಕೆ, ವರ್ಣನೆ ಅದೊಂದು ಕನ್ನಡ ಅಧ್ಯಯನದ ವಿಶ್ವವಿದ್ಯಾಲಯವೇ ಆಗಿದೆ ಎಂದರು.
ಹೆತ್ತೂರು ಮೊರಾರ್ಜಿ ಶಾಲೆಯ ಪ್ರಾಂಶುಪಾಲ ಶಿವರಾಜ್, ಹೆಮ್ಮಿಗೆ ಮೋಹನ್ ಮಾತನಾಡಿದರು. ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಕೃಷ್ಣ, ಇನ್ಸ್ಪೆಕ್ಟರ್ ಸದಾಶಿವ, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು, ತಾಲ್ಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಮರಗತ್ತೂರು ಉಮೇಶ್, ಉಪಾಧ್ಯಕ್ಷ ನಂದಿ ಕೃಪ ದೇವರಾಜ್, ನಿರ್ದೇಶಕರಾದ ಕೆ.ಎನ್. ಸುಬ್ರಹ್ಮಣ್ಯ, ರಾಮಚಂದ್ರ, ಬಾಗರಹಳ್ಳಿ ಪುಟ್ಟಸ್ವಾಮಿ ಗೌಡ, ಸಚಿನ್ ಪ್ರಸಾದ್, ನಿವೃತ್ತ ತಹಶೀಲ್ದಾರ್ ಅಣ್ಣೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಡಿ ಆದರ್ಶ್, ಕೆಂಪೇಗೌಡ ಯವ ವೇದಿಕೆ ಅಧ್ಯಕ್ಷ ವಿಶಾಲ್ ಗೌಡ, ನೌಕರರ ಸಂಘದ ಅಧ್ಯಕ್ಷ ಸುನೀಲ್, ಮಹಿಳಾ ವೇದಿಕೆ ಅಧ್ಯಕ್ಷೆ ವಾಸಂತಿ ಮಲ್ಲೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.