
ಹಾಸನ: ವಕೀಲರ ಪ್ರತಿಭಟನೆ ಬಳಿಕ ಮನವಿ ಸ್ವೀಕರಿಸದೆ ಜಿಲ್ಲಾಧಿಕಾರಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ವಕೀಲರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಿಂದ ನೂರಾರು ಸಂಖ್ಯೆಯಲ್ಲಿ ಸಂಘಟಿತರಾಗಿ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ವಕೀಲರು, ಎನ್.ಆರ್. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ಜಿಲ್ಲಾಧಿಕಾರಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದರು.
ಈ ವೇಳೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾರ್ಲೆ ಮೊಗಣ್ಣಗೌಡ ಮಾತನಾಡಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ನ್ಯಾಯಾಂಗ ನಿಂದನೆ ಮಾಡಿದ್ದು, ಸಂಘದ ಸದಸ್ಯರೆಲ್ಲ ಸೇರಿ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಲು ಬಂದಿದ್ದೆವು. ಕಚೇರಿ ಎದುರು ನಾವು ಒಂದು ಗಂಟೆ ಕಳೆದರೂ ನಮ್ಮ ಮನವಿ ಸ್ವೀಕರಿಸದೇ ಜಿಲ್ಲಾಧಿಕಾರಿ ಉದ್ಧಟತನ ತೋರಿದ್ದಾರೆ. ಇದನ್ನು ಜಿಲ್ಲಾ ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.
ಈ ಪ್ರಕರಣ ಸಂಬಂಧ ಜಿಲ್ಲಾಧಿಕಾರಿ, ವಕೀಲರ ಸಂಘದ ಕ್ಷಮೆ ಕೇಳಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ಜಿಲ್ಲಾಧಿಕಾರಿ ವರ್ಗಾವಣೆ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ. ರಾಜ್ಯ ಹೈಕೋರ್ಟ್ನಲ್ಲಿ ಜಿಲ್ಲಾಧಿಕಾರಿ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿ ನಡೆ ಖಂಡಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಹೊಂಬೇಶ್ ಮಾತನಾಡಿ, ವಕೀಲರ ಸಂಘದಿಂದ ಶಾಂತಿಯುತವಾಗಿ ಹೋರಾಟ ಮಾಡಿ ಜಿಲ್ಲಾಧಿಕಾರಿಗೆ ಮನವಿ ನೀಡಲು ಬಂದಿದ್ದೆವು. ಜಿಲ್ಲಾಧಿಕಾರಿ ನಿರ್ಲಕ್ಷ್ಯ ತೋರಿದ್ದು ಸರಿಯಲ್ಲ. ಜಿಲ್ಲಾಧಿಕಾರಿ ಅನುಪಸ್ಥಿತಿಯಲ್ಲಿ ಮಾತ್ರ ಹೆಚ್ಚುವರಿ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಬೇಕಲ್ಲವೆ ಎಂದು ಪ್ರಶ್ನಿಸಿದರು.
ಎಸ್.ದ್ಯಾವೇಗೌಡ, ಪೂರ್ಣಚಂದ್ರ ತೇಜಸ್ವಿ, ನವಿಲೆ ಅಣ್ಣಪ್ಪ, ಸಂಘದ ಖಜಾಂಚಿ ಜಿ.ಎನ್. ಸುಗುಣ, ದೇವರಾಜೇಗೌಡ, ಎಂ.ಟಿ. ತಿಮ್ಮೇಗೌಡ, ಜೆ.ಪಿ. ಶೇಖರ್, ಮೋಹನ್ ಕುಮಾರ್, ಚೆಲುವರಾಜು, ಚೆಲುವೇಗೌಡ, ಮಹೇಶ, ವಿಜಯಕುಮಾರ್, ಶ್ರೀಕಾಂತ್ ಚೆನ್ನಂಗಿಹಳ್ಳಿ, ಭಾಗ್ಯ, ಧನಲಕ್ಷ್ಮಿ, ಜಯಲಕ್ಷ್ಮಿ, ವಿಶ್ವನಾಥ್ ಇತರರು ಭಾಗವಹಿಸಿದ್ದರು.
ಅನಗತ್ಯವಾಗಿ ಬೆಳೆಸಲಾಗಿದೆ: ಡಿಸಿ ವಕೀಲರ ಸಂಘದಿಂದ ಯಾವ ಕಾರಣಕ್ಕೆ ಪ್ರತಿಭಟನೆ ಮಾಡಲಾಗಿತ್ತು ಎಂಬ ಗೊಂದಲವಿದ್ದು ಸ್ಪಷ್ಟತೆ ಇಲ್ಲವಾಗಿದೆ. ಈ ವಿಷಯವನ್ನು ಅನಗತ್ಯವಾಗಿ ಬೆಳೆಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಕೀಲರು ಪ್ರತಿಭಟನೆ ಮಾಡಿದ ದಿನ ಎಸ್ಸಿಪಿ ಟಿಎಸ್ಪಿ ಸಭೆ ಮಾಡಲಾಗುತ್ತಿತ್ತು. 50 ಕ್ಕೂ ಹೆಚ್ಚು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಹತ್ತಾರು ಮಂದಿ ಗ್ರಾಮಸ್ಥರು ಇದ್ದರು. ಈ ಸಂದರ್ಭದಲ್ಲಿ ವಕೀಲರಿಗೆ ನಮ್ಮ ಇತಿಮಿತಿಯಲ್ಲಿ ಸ್ಪಂದಿಸಿದ್ದೇವೆ ಎಂದರು. ಯಾವುದೇ ವಿಷಯಕ್ಕೆ ಹೇಗೆ ಸ್ಪಂದಿಸಬೇಕೋ ಅದನ್ನು ಮಾಡಿದ್ದೇನೆ. ಈ ನಡುವೆ ವಕೀಲರು ರಸ್ತೆ ತಡೆ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ತೊಂದರೆ ಆಗಿದೆ. ಅಷ್ಟು ಮಂದಿ ಅಧಿಕಾರಿಗಳಿದ್ದಾಗ ಒತ್ತಡದಲ್ಲಿ ಇರುತ್ತೇವೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ವಕೀಲರು ಶಾಂತಿಯುತ ಪ್ರತಿಭಟನೆ ಮಾಡಬೇಕು ಎಂದರು. ಮನವಿ ಸ್ವೀಕರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಹೋಗಿದ್ದಾರೆ ಸಮಯಕ್ಕೆ ಸರಿಯಾಗಿ ಸ್ಪಂದಿಸಿದ್ದೇವೆ. ವಕೀಲರ ಆಕ್ರೋಶ ಏಕೆ ಎಂಬುದೇ ಅರ್ಥ ಆಗದೇ ಇರುವ ವಿಷಯ. ರಸ್ತೆ ತಡೆ ವಿರೋಧಿ ಕೂಗು ಯಾವ ಕಾರಣಕ್ಕೆ ಎಂದು ತಿಳಿದಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.