ADVERTISEMENT

ಮತ್ತೆ ಕಾನೂನು ಹೋರಾಟ: ರೇವಣ್ಣ‌

ಹಾಸನ, ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನ ಮೀಸಲಾತಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 13:05 IST
Last Updated 22 ಏಪ್ರಿಲ್ 2021, 13:05 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ’ಸರ್ಕಾರಿ ವಕೀಲರು ಮತ್ತು ಅಡ್ವೊಕೇಟ್‌ ಜನರಲ್‌ ಅವರು ಪ್ರಾದೇಶಿಕ ಪಕ್ಷಗಳ ದಮನ ಮಾಡುವ ಕೆಲಸ
ಮಾಡುತ್ತಿದ್ದಾರೆ' ಎಂದು ಶಾಸಕ ಎಚ್‌.ಡಿ.ರೇವಣ್ಣ ಆರೋಪಿಸಿದರು.

ಅರಸೀಕೆರೆ ಮತ್ತು ಹಾಸನ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲು ಪ್ರಶ್ನಿಸಿ ಜೆಡಿಎಸ್‌ ಸಲ್ಲಿಸಿದ್ದ ಅರ್ಜಿಯನ್ನು
ಹೈಕೋರ್ಟ್‌ ತಿರಸ್ಕರಿಸಿರುವ ಸಂಬಂಧ ಗುರುವಾರ ಪ್ರತಿಕ್ರಿಯಿಸಿದ ಅವರು, ‘ಸರ್ಕಾರದ ಆಸ್ತಿ ಉಳಿಸಲು ತಲೆ
ಕೆಡಿಸಿಕೊಳ್ಳುವ ಬದಲು ರಾಜಕೀಯ ಪಕ್ಷ ದಮನ ಮಾಡಲು ಹೊರಟಿದ್ದಾರೆ. ಮಾಹಿತಿ ನೀಡಿದರೂ ನ್ಯಾಯಾಧೀಶರ
ಮುಂದೆ ಪ್ರಸ್ತಾಪ ಮಾಡಿಲ್ಲ. ಅಡ್ವೊಕೇಟ್‌ ಜನರಲ್‌ ಹುದ್ದೆಗೆ ಗೌರವ ತರುವಂತೆ ನಡೆದುಕೊಳ್ಳಬೇಕು’ ಎಂದರು.

‘ಸುಪ್ರೀಂ ಕೋರ್ಟ್ ಸ್ಪಷ್ಟ ಸೂಚನೆ ನೀಡಿದರೂ ಈ ರೀತಿ ನಡೆದುಕೊಂಡರೆ ಮುಂದೆ ರಾಜ್ಯ ಯಾವ ಹಂತಕ್ಕೆ
ಹೋಗುತ್ತದೋ ಗೊತ್ತಿಲ್ಲ. ನೈಸ್‌ ಕಂಪನಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಾನೂನು ಸಚಿವರನ್ನೇ
ಬದಲಾವಣೆ ಮಾಡಿದ ಸರ್ಕಾರಕ್ಕೆ ಏನು ಹೇಳಬೇಕೋ ಗೊತ್ತಿಲ್ಲ. ಈ ರೀತಿಯಾದರೆ ಚುನಾವಣೆ ಏಕೆ ನಡೆಸಬೇಕು.
? ಅಧ್ಯಕ್ಷ, ಉಪಾಧ್ಯಕ್ಷರನ್ನು ನೇರವಾಗಿ ನೇಮಕ ಮಾಡಿದರೆ ಚುನಾವಣೆ ವೆಚ್ಚವೂ ಉಳಿತಾಯವಾಗುತ್ತದೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಪಕ್ಷದ ಕಾನೂನು ಘಟಕದ ಜತೆ ಚರ್ಚಿಸಿ ಕಾನೂನು ಹೋರಾಟ ಮುಂದುವರಿಸಲಾಗುವುದು. ಜಿಲ್ಲೆಯಲ್ಲಿ 6 ಜನ
ಜೆಡಿಎಸ್‌ ಶಾಸಕರಿದ್ದಾರೆ. ನಗರಸಭೆಯಲ್ಲಿಯೂ ಜೆಡಿಎಸ್‌ ಬಹುಮತ ಇದೆ. ಮೀಸಲಾತಿ ಬಳಸಿ ಹಿಡಿಯುವ
ಅಧಿಕಾರ ಹೆಚ್ಚು ದಿನ ಇರುವುದಿಲ್ಲ ಎಂಬುದನ್ನು ಬಿಜೆಪಿ ಮುಖಂಡರು ಅರ್ಥ ಮಾಡಿಕೊಳ್ಳಬೇಕು’ ಎಂದು ಆಕ್ರೋಶ
ವ್ಯಕ್ತಪಡಿಸಿದರು.

ಘಟನೆ ವಿವರ:

ಅರಸೀಕೆರೆ ಹಾಗೂ ಹಾಸನ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಗೆ ಹೈಕೋರ್ಟ್‌ ಸಮ್ಮಿತಿಸಿದ್ದು,ತಡೆ ಹಿಡಿದಿದ್ದ ಚುನಾವಣಾ ಫಲಿತಾಂಶ ಪ್ರಕಟಿಸಲು ಇದ್ದ ಅಡ್ಡಿ ನಿವಾರಣೆಯಾಗಿದೆ.

ಈ ಸಂಬಂಧ ಬುಧವಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಸರ್ಕಾರದ ಪರ ವಕೀಲರಾದ ಪ್ರತಿಮಾ
ಹೊನ್ನಾಪುರ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯೆಟ್‌ ಸಲ್ಲಿಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ
ಚುನಾವಣಾ ಫಲಿತಾಂಶ ಪ್ರಕಟಿಸುವಂತೆ ಸಲಹೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಮೇಲ್ಮನವಿಗೆ ನ್ಯಾಯಾಲಯ ಅನುಮತಿ ನೀಡಿದೆ. ಪ್ರತಿವಾದಿಗಳು ಅಪೆಕ್ಸ್‌ ನ್ಯಾಯಾಲಯದಲ್ಲಿ
ಪ್ರಕರಣ ಮುಂದುವರಿಸಬಹುದು. ಇಂದಿನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ತಕ್ಷಣವೇ ಕೇವಿಯಟ್‌
ಅರ್ಜಿಯನ್ನು ಸಲ್ಲಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದುಹೇಳಿದ್ದಾರೆ.

ಹಾಸನ, ಅರಸೀಕೆರೆ, ಕೊಪ್ಪಳ, ಹರಿಹರ, ಶಿಡ್ಲಘಟ್ಟ ನಗರಸಭೆ ಮತ್ತು ಪುರಸಭೆಗಳಾದ ಕೆ.ಆರ್‌.ಪೇಟೆ ಮತ್ತು
ಚನ್ನಗಿರಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನದ ಫಲಿತಾಂಶಗಳನ್ನು ಮಧ್ಯಂತರ ಆದೇಶವಿದ್ದ ಕಾರಣ ಘೋಷಿಸಿರಲಿಲ್ಲ.

ಹಾಸನ ಹಾಗೂ ಅರಸೀಕೆರೆ ನಗರಸಭೆಗಳಲ್ಲಿ ಹೆಚ್ಚಿನ ಜೆಡಿಎಸ್‌ ಸದಸ್ಯರನ್ನು ಹೊಂದಿದ್ದರೂ ಮೀಸಲಾತಿ ಅನ್ವಯ
ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಸದಸ್ಯರು ಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.