ADVERTISEMENT

ಸೇತುವೆ ದಾಟಲಾಗದ ಸರಕು ಲಾರಿ

ಹೆದ್ದಾರಿಯಲ್ಲಿ ಅವೈಜ್ಞಾನಿಕ ಸೇತುವೆ: ಟ್ಯಾಂಕ್ ಹೊತ್ತ ಲಾರಿ ಸಿಲುಕಿ ಜಖಂ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 4:38 IST
Last Updated 9 ಜುಲೈ 2025, 4:38 IST
ಸಕಲೇಶಪುರದ ಬೈಪಾಸ್‌ನ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ನಿರ್ಮಾಣ ಮಾಡಿರುವ ಅವೈಜ್ಞಾನಿಕ ಸೇತುವೆ.
ಸಕಲೇಶಪುರದ ಬೈಪಾಸ್‌ನ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ನಿರ್ಮಾಣ ಮಾಡಿರುವ ಅವೈಜ್ಞಾನಿಕ ಸೇತುವೆ.   

ಸಕಲೇಶಪುರ: ಇಲ್ಲಿಯ ಬೈಪಾಸ್‌ನಲ್ಲಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 75ರಲ್ಲಿ ಕಡಿಮೆ ಎತ್ತರದ ಅವೈಜ್ಞಾನಿಕ ಸೇತುವೆ ನಿರ್ಮಾಣ ಮಾಡಿರುವುದರಿಂದ ಮಂಗಳೂರಿಗೆ ಟ್ಯಾಂಕ್‌ ಹೊತ್ತು ಸಾಗುತ್ತಿದ್ದ ಲಾರಿಯೊಂದು ಸಂಚಾರ ಮಾಡಲು ಸಾಧ್ಯವಾಗಲಿಲ್ಲ. ಒಂದು ಕಿ.ಮೀ. ಹಿಂಬದಿ ಬಂದು ಪಟ್ಟಣದೊಳಗೆ ಜಖಂಗೊಂಡಿದೆ.

ಮಂಗಳೂರಿನಿಂದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ಹೊರ ರಾಜ್ಯಗಳಿಂದ ಸರಕು ಸಾಗಣೆ ಮಾಡುವುದಕ್ಕೆ ಬಳಕೆ ಆಗುತ್ತಿರುವ ಜೀವನಾಡಿ. ಇಂತಹ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಟ್ಟಣದ ಬೈಪಾಸ್‌ನಲ್ಲಿ ಹಾಲೇಬೇಲೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೆದ್ದಾರಿ ಪ್ರಾಧಿಕಾರದಿಂದ ಹೊಸದಾಗಿ ಸೇತುವೆ ನಿರ್ಮಾಣ ಮಾಡಲಾಗಿದೆ.

ಮಂಗಳವಾರ ಲಾರಿ ಹಾಗೂ ಲಾರಿಯ ಮೇಲೆ ಹೊತ್ತ ಟ್ಯಾಂಕರ್ ಸೇರಿ ಕೇವಲ 16 ಅಡಿ ಎತ್ತರವಿದ್ದು, ಈ ಸೇತುವೆಯಲ್ಲಿ ಸಂಚಾರ ಮಾಡಲು ಸಾಧ್ಯವಾಗಲಿಲ್ಲ. ಉದ್ದ ಹಾಗೂ ಎತ್ತರದ ಟ್ಯಾಂಕ್ ಹೊತ್ತ ಕಾರಣ ಕೊಲ್ಲಹಳ್ಳವರೆಗೂ ಹಿಂಬದಿ ಬಂದು, ಸಕಲೇಶಪುರ ಪಟ್ಟಣದೊಳಗೆ ಹಾದು ಹೋಗಿರುವ ಹಳೆ ಹೆದ್ದಾರಿಯ ಮೂಲಕ ಸಂಚಾರ ಮಾಡಬೇಕಾಯಿತು.

ADVERTISEMENT

ಆದರೆ ಹಳೆ ಹೆದ್ದಾರಿಯಿಂದ ಚತುಷ್ಪಥಕ್ಕೆ ಹೋಗುತ್ತಿದ್ದಾಗ, ಕೆಂಪೇಗೌಡ ಪ್ರತಿಮೆ ಸಮೀಪ ಲಾರಿ ಜಖಂಗೊಡಿತ್ತು. ಪ್ರತಿಮೆ ಮುಂಭಾಗದಲ್ಲಿ ಹಾಕಲಾಗಿದ್ದ ಇಂಟರ್‌ ಲಾಕ್‌ ಪುಡಿ ಪುಡಿಯಾಗಿ ಆ ಪ್ರದೇಶದಲ್ಲಿ ಹೊಂಡವೇ ನಿರ್ಮಾಣವಾಯಿತು.

ಇಡೀ ದೇಶದಲ್ಲಿ ಹೆದ್ದಾರಿಗಳನ್ನು ವೈಜ್ಞಾನಿಕವಾಗಿಯೂ, ಹೈಟೆಕ್‌ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಹಾಸನದಿಂದ ಮಾರನಹಳ್ಳಿವರೆಗೂ ಕೇವಲ 45 ಕಿ.ಮೀ. ಉದ್ದ ಚತುಷ್ಪಥವನ್ನು 2017 ರಿಂದ ಆಮೆ ಗತಿಯಲ್ಲಿ ಮಾಡಲಾಗುತ್ತಿದೆ.

ಮಾಡಿರುವ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಬಂದರಿನಿಂದ ಸರಕುಗಳನ್ನು ಹೊತ್ತು ಸಾಗುವ ಲಾರಿಗಳ ಸಂಚಾರಕ್ಕೆ ಅಗತ್ಯ ಎತ್ತರದ ಸೇತುವೆಯನ್ನೂ ಮಾಡಿಲ್ಲ. ಹೆದ್ದಾರಿ ಎಂಜಿನಿಯರ್‌ಗಳು ಎಷ್ಟೊಂದು ಬೇಜವಾಬ್ದಾರಿಯಿಂದ ಕಾಮಗಾರಿ ಮಾಡಿದ್ದಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾಗಿಲ್ಲ ಎಂದು ಲಾರಿ ಚಾಲಕರು ಅಲವತ್ತಿಕೊಳ್ಳುತ್ತಿದ್ದಾರೆ.

ಸೇತುವೆ ಕೆಳಗೆ ಸಂಚಾರ ಮಾಡಲು ಸಾಧ್ಯವಾಗದ ಲಾರಿ ಸಕಲೇಶಪುರದ ಹಳೆ ಹೆದ್ದಾರಿಯಲ್ಲಿ ಹೂತುಕೊಂಡಿದೆ.

ಅನಕ್ಷರಸ್ಥರೂ ಅಚ್ಚುಕಟ್ಟಾಗಿ ಕಟ್ಟಡ ಕಟ್ಟುತ್ತಾರೆ. ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು ಪದವಿ ಪಡೆದಿದ್ದಾರೋ ಎಂಬ ಅನುಮಾನ ಹುಟ್ಟುತ್ತಿದೆ. ಎಂಜಿನಿಯರ್‌ ವಿರುದ್ಧ ಪ್ರಕರಣ ದಾಖಲು ಮಾಡಬೇಕು.

-ಜೈ ಮಾರುತಿ ದೇವರಾಜ್ ಜೇನು ಪೋಷಕರ ಸಹಕಾರ ಸಂಘ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.