ಬೇಲೂರು: ಪ್ರವಾಸಿ ತಾಣವಾದ ಬೇಲೂರನ್ನು ಸ್ವಚ್ಛಗೊಳಿಸುವಲ್ಲಿ ಪೌರಕಾರ್ಮಿಕರ ಶ್ರಮ ಹೆಚ್ಚಿದೆ ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು.
ಇಲ್ಲಿನ ಆರ್ವಿ ಕಲ್ಯಾಣ ಮಂಟಪದಲ್ಲಿ ಪುರಸಭೆಯಿಂದ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರ ಶ್ರಮದ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಅಪಾರ ಗೌರವ ಹೊಂದಿದ್ದಾರೆ. ಪೌರಕಾರ್ಮಿಕರು ಮಳೆ, ಗಾಳಿ, ಚಳಿ ಎನ್ನದೇ ನಸುಕಿನಲ್ಲಿ ಎದ್ದು ಪಟ್ಟಣ, ನಗರವನ್ನು ಸ್ಚಚ್ಛ ಮಾಡುವ ಸೇವೆಯಲ್ಲಿ ನಿರತರಾಗಿರುತ್ತಾರೆ. ಅವರ ಸೇವೆ ಅತ್ಯಮೂಲ್ಯವಾದದ್ದು. ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ನೀರು ಸರಬರಾಜುದಾರರನ್ನು ಕಾಯಂ ಮಾಡುವಂತೆ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಲಿದ್ದೇನೆ ಎಂದರು.
ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಮಾತನಾಡಿ, ಪೌರಕಾರ್ಮಿಕರು ಜೀವದ ಹಂಗನ್ನು ತೊರೆದು ನಿತ್ಯ ಪಟ್ಟಣದ ಸ್ವಚ್ಛತಾ ಕೆಲಸ ಮಾಡುವ ಕಾಯಕ ಯೋಗಿಗಳು. ಅವರ ಸಮಸ್ಯೆಗಳಿಗೆ ನಾವುಗಳು ಸ್ಪಂದಿಸಬೇಕಿದೆ ಎಂದರು.
ಪುರಸಭೆ ಸದಸ್ಯ ಬಿ.ಗಿರೀಶ್ ಮಾತನಾಡಿ, ಪೌರಕಾರ್ಮಿಕರಿಗೆ ಬಂಟೇನಹಳ್ಳಿ ಹಾಗೂ ರಾಯಾಪುರದಲ್ಲಿರುವ ನೀವೇಶನ ಕೊಡಲು ಶಾಸಕರು ಮುಂದಾಗಬೇಕು. ಎಸ್ಎಫ್ಸಿ ಅನುದಾನ ಹಾಗೆಯೇ ಇದ್ದು, ಇದರಲ್ಲಿ ಕಾರ್ಮಿಕರಿಗೆ ವೈಯಕ್ತಿಕ ಸೌಲಭ್ಯಗಳನ್ನು ಕೊಡಲು ಮುಂದಾಗೋಣ ಎಂದರು.
ಬೇಲೂರು-ಹಳೇಬೀಡು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ತೌಫಿಕ್, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾವಿ, ಪುರಸಭೆ ಸದಸ್ಯರಾದ ತೀರ್ಥಕುಮಾರಿ, ಬಿ.ಎ. ಜಮಾಲ್ಲುದ್ದೀನ್, ಎ.ಆರ್. ಆಶೋಕ್, ಪ್ರಭಾಕರ್, ಜಗದೀಶ್, ಮೀನಾಕ್ಷಿ, ರತ್ನಮ್ಮ, ಆಶ್ರಯ ಸಮಿತಿ ಸದಸ್ಯ ಬಿ.ಸಿ.ಹರೀಶ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಜಯರಾಮ್, ಆರೋಗ್ಯಾಧಿಕಾರಿ ಲೋಹಿತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.