ಅರಕಲಗೂಡು: ರಥಸಪ್ತಮಿ ಪ್ರಯುಕ್ತ ಪಟ್ಟಣದ ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರು ಮಂಗಳವಾರ ಸಾಮೂಹಿಕ ಸೂರ್ಯ ನಮಸ್ಕಾರ ನಡೆಸಿದರು.
ಇಲ್ಲಿನ ದೇವರಾಜ ಅರಸು ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 20 ಮಂದಿ 108 ಸೂರ್ಯ ನಮಸ್ಕಾರ ಮಾಡಿದರು. ಯೋಗ ಶಿಕ್ಷಕಿ ಮಣಿಯಮ್ಮ ಮಾತನಾಡಿ,‘ಸೂರ್ಯ ತನ್ನ ಪಥ ಬದಲಾವಣೆ ಮಾಡುವ ರಥಸಪ್ತಮಿಯಂದು ನಮಸ್ಕಾರ ಪ್ರಿಯನಾದ ಸೂರ್ಯನಿಗೆ ಮಂತ್ರ ಸಹಿತ ನಮಸ್ಕಾರ ನಡೆಸುವುದರಿಂದ ಆತ ಸಂಪ್ರೀತನಾಗಿ ಆರೋಗ್ಯ ನೀಡಿ ಕಾಪಾಡುತ್ತಾನೆ. ಸಮಿತಿ ಪ್ರತಿ ವರ್ಷ ಸಾಮೂಹಿಕ ಸೂರ್ಯ ನಮಸ್ಕಾರ ನಡೆಸುತ್ತಾ ಬಂದಿದೆ’ ಎಂದರು.
ಪ್ರತಿದಿನ ಯೋಗ, ಸೂರ್ಯ ನಮಸ್ಕಾರ ಮಾಡುವುದರಿಂದ ಮನುಷ್ಯ ತನ್ನ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಂಡು ಚಟುವಟಿಕೆ ಜೀವನ ನಡೆಸಲು ಸಾಧ್ಯವಾಗುತ್ತದೆ. ಸಮಿತಿ ಎರಡು ಶಾಖೆಗಳನ್ನು ತೆರೆದಿದ್ದು, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಉಚಿತ ಯೋಗ ಶಿಕ್ಷಣ ನೀಡುತ್ತಿದೆ. ಸಾರ್ವಜನಿಕರು ಇದರ ಉಪಯೋಗ ಪಡೆಯುವಂತೆ ಕೋರಿದರು.
ತಾಪಂ ಮಾಜಿ ಅಧ್ಯಕ್ಷ ಎಚ್. ಮಾದೇಶ್, ಯೋಗ ಶಿಕ್ಷಕರಾದ ರಘು, ಪ್ರಕಾಶ್ ಪಾಲ್ಗೊಂಡಿದ್ದರು.
ಸೂರ್ಯಮಂಡಲೋತ್ಸವ: ಪಟ್ಟಣದ ಕೋಟೆ ಐತಿಹಾಸಿಕ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ರಥಸಪ್ತಮಿ ಪ್ರಯುಕ್ತ ಮಂಗಳವಾರ ಸೂರ್ಯ ಮಂಡಲೋತ್ಸವ ನಡೆಯಿತು. ಮೂಲ ವಿಗ್ರಹಕ್ಕೆ ವಿವಿಧ ಪೂಜೆ ನಡೆಸಿದ ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ರಥಬೀದಿಯಲ್ಲಿ ಉತ್ಸವ ನಡೆಸಲಾಯಿತು. ನಂತರ ದೇವಾಲಯದಲ್ಲಿ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.