ಹಾಸನ: ‘ಮೇಕೆದಾಟು ಯೋಜನೆ ಕಾರ್ಯಗತಗೊಂಡರೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡೆಯುತ್ತಿರುವ ಶತಮಾನದ ವಿವಾದವನ್ನು ಬಗೆಹರಿಸಲು ಸಾಧ್ಯ’ ಎಂದು ನೀರಾವರಿ ತಜ್ಞಡಾ. ಬಿ.ಈ. ಯೋಗೇಂದ್ರ ಅಭಿಪ್ರಾಯಪಟ್ಟರು.
ಮೇಕದಾಟು ಯೋಜನೆ ಕುರಿತು ಮಂಗಳವಾರ ಮಾಧ್ಯಮ ಸಂವಾದ ನಡೆಸಿದ ಅವರು, ‘ಶಿವನಸಮುದ್ರ ಜಲವಿದ್ಯುತ್ ಕೇಂದ್ರಕ್ಕೆ ತೊಂದರೆಯಾಗದ ರೀತಿಯಲ್ಲಿ 100 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟನ್ನು ಮೇಕೆದಾಟುವಿನಲ್ಲಿ ಕಟ್ಟಬಹುದು. ಅಲ್ಲದೇಜಲಾನಯನ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಕಾಡು ಬೆಳೆಸಲು ಮತ್ತು ಅಂತರ್ಜಲವೃದ್ಧಿಗೆ ಮೇಕೆದಾಟು ಸಹಕಾರಿಯಾಗಲಿದೆ’ ಎಂದು ತಿಳಿಸಿದರು.
‘ಅತ್ಯಂತ ಕಿರಿದಾದ ಕಾವೇರಿ ನದಿ ಕಣಿವೆಯ ಮೇಕೆದಾಟು ಯೋಜನೆಯ ಸ್ಥಳವಾಗಿದ್ದು, ಇದು ಸಮುದ್ರ ಮಟ್ಟದಿಂದ 346 ಮೀಟರ್ ಎತ್ತರದಲ್ಲಿದೆ. ಅಣೆಕಟ್ಟು ಕಟ್ಟಲು ಸೂಕ್ತವಾದ ಸ್ಥಳವಾಗಿದೆ. ಯೋಜನೆಗೆ 4.3 ಚದರ ಕಿಲೋ ಮೀಟರ್ ಪ್ರದೇಶ ಮುಳುಗಡೆಯಾಗಲಿದ್ದು,76 ಮೀಟರ್ ಎತ್ತರದ ಅಣೆಕಟ್ಟೆಯನ್ನು ಕಟ್ಟಲು ಸಾಧ್ಯವಿದೆ’ ಎಂದು ಹೇಳಿದರು.
‘ರಾಜ್ಯ ಸರ್ಕಾರ ವಿಸ್ತೃತವಾದ ಯೋಜನೆ ತಯಾರಿಸಲು ಕೇಂದ್ರ ಸರ್ಕಾರದಿಂದ ಷರತ್ತು ಬದ್ಧಒಪ್ಪಿಗೆ ಪಡೆದುಕೊಂಡಿದೆ. ಈ ವಿಚಾರದಲ್ಲಿ ತಮಿಳುನಾಡು ಸರ್ಕಾರ ತಕರಾರು ತೆಗೆದಿದ್ದು,ಒಟ್ಟು ರಾಜ್ಯ ಸರ್ಕಾರ 67 ಟಿಎಂಸಿ ಅಡಿ ನೀರು ಸಂಗ್ರಹಸಾಮರ್ಥ್ಯದ ಅಣೆಕಟ್ಟು ನಿರ್ಮಿಸಿ ಬೆಂಗಳೂರು ಹಾಗೂ ಇನ್ನು ಕೆಲ ನಗರಗಳಿಗೆ ಕುಡಿಯುವ ನೀರು ಒದಗಿಸುವ ಮತ್ತು 400 ಮೆಗಾವಾಟ್ ವಿದ್ಯುತ್ ತಯಾರಿಸುವ ಯೋಜನೆತಯಾರಿಸಿದೆ’ ಎಂದು ವಿವರಿಸಿದರು.
‘ಕಾವೇರಿ ಜಲವಿವಾದ ನ್ಯಾಯಾಧೀಕರಣದ ತೀರ್ಪಿನಂತೆ ರಾಜ್ಯದ ನೀರಿನ ಪಾಲು 285 ಟಿಎಂಸಿ ಅಡಿ ಬಳಕೆ ಮಾಡಿಕೊಳ್ಳಲು ನೀರಿನ ಸಂಗ್ರಹ ಸಾಮರ್ಥ್ಯ ಇಲ್ಲ. ಆದ್ದರಿಂದ ಮೇಕೆದಾಟು ಯೋಜನೆ ಕಾರ್ಯಗತವಾದರೆ ತಮಿಳುನಾಡಿಗೆ 162 ಟಿಎಂಸಿ ಅಡಿ ನೀರು ಹರಿಸಲು ಅನುಕೂಲವಾಗಲಿದೆ. ಇದರಿಂದ ಬರ ಪರಿಸ್ಥಿತಿಯಲ್ಲೂ ನೀರಿನ ಸಮಸ್ಯೆ ಕಾಣಿಸುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.