ಹಾಸನ: ಬೇಡಿಕೆ ಈಡೇರಿಕೆಗೆ ಒಪ್ಪದ ನ್ಯೂ ಮಿನರ್ವ ಮಿಲ್ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಎಐಟಿಯುಸಿ ನೇತೃತ್ವದಲ್ಲಿ ಕಾರ್ಮಿಕರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಸೇವೆ ಕಾಯಂ, ವೇತನ ಪರಿಷ್ಕರಣೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಡಳಿತ ಮಂಡಳಿಯನ್ನು ಒತ್ತಾಯಿಸಿ ಮಾ. 2 ರಿಂದ ಆರಂಭಿಸಿದ ಮುಷ್ಕರ ನೂರು ದಿನ ಪೂರೈಸಿದೆ.
ಘಟಕದ ಬಳಿ ಸರಣಿ ಧರಣಿ ನಡೆಸುತ್ತಿದ್ದರೂ ಕಾರ್ಮಿಕರ ಬೇಡಿಕೆಗಳಿಗೆ ಆಡಳಿತ ಮಂಡಳಿ ಸ್ಪಂದಿಸದ ಕಾರಣ ಪ್ರತಿಭಟನೆಯನ್ನು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಸ್ಥಳಾಂತರಿಸಲಾಗಿದೆ.
ಎಐಟಿಯುಸಿ ಮುಖಂಡ ಎಂ.ಸಿ.ಡೋಂಗ್ರೆ ಮಾತನಾಡಿ, ಕಾರ್ಮಿಕರು ತಮ್ಮ ವೇತನ ಪರಿಷ್ಕರಣೆ ಮಾಡುವಂತೆ ಅ. 18 ರಂದು ಕಾರ್ಖಾನೆ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದರು. ಆದರೆ ಮನವಿಗೆ ಸ್ಪಂದಿಸದ ಕಾರಣ ಮಾರ್ಚ್ 2ರಿಂದ ಕಾರ್ಖಾನೆ ಎದುರು ಮುಷ್ಕರ ನಡೆಸಲಾಯಿತು. ಮುಷ್ಕರ ನೂರು ದಿನ ಪೂರೈಸಿದರೂ ಆಡಳಿತ ಮಂಡಳಿ ಬೇಡಿಕೆಗೆ ಸ್ಪಂದಿಸಿಲ್ಲ. ಹಾಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ತಕ್ಷಣ ಸಮಸ್ಯೆ ಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.