ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಹಾಸನ: ‘ಕನಿಷ್ಠ ವೇತನವನ್ನು ₹36ಸಾವಿರಕ್ಕೆ ಹೆಚ್ಚಿಸಿ ಪರಿಷ್ಕರಿಸಬೇಕು’ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಿಐಟಿಯು 16ನೇ ರಾಜ್ಯ ಸಮ್ಮೇಳನ ಹಕ್ಕೊತ್ತಾಯ ಮಂಡಿಸಿದೆ.
ಇಲ್ಲಿ ಶುಕ್ರವಾರ ನಿರ್ಣಯಗಳನ್ನು ಅಂಗೀಕರಿಸಲಾಯಿತು.
‘ಗುತ್ತಿಗೆ, ಹೊರಗುತ್ತಿಗೆ ನೌಕರರ ಕೆಲಸವನ್ನು ಕಾಯಂಗೊಳಿಸಬೇಕು. ಸರ್ಕಾರವು ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲು ನಿರ್ಣಯಿಸಲಾಗಿದೆ’ ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಇವು, ರಾಜ್ಯದ ಲಕ್ಷಾಂತರ ಕಾರ್ಮಿಕರ ಭವಿಷ್ಯದ ಮೇಲೆ ನೇರ ಪರಿಣಾಮ ಬೀರಬಲ್ಲ ನಿರ್ಣಾಯಕ ನಿರ್ಣಯಗಳಾಗಿವೆ’ ಎಂದರು.
‘ರಾಜ್ಯದ 1.5 ಕೋಟಿ ಕಾರ್ಮಿಕರು ಎದುರಿಸುತ್ತಿರುವ ದೀರ್ಘಕಾಲೀನ ಆರ್ಥಿಕ ಸಂಕಷ್ಟ ಮತ್ತು ಉದ್ಯೋಗ ಅಭದ್ರತೆಯ ಬಿಕ್ಕಟ್ಟುಗಳನ್ನು ಪರಿಹರಿಸುವ ಗುರಿ ಹೊಂದಿರುವ ಪರಿವರ್ತನಾಶೀಲ ನಿರ್ಣಯಗಳ ಮೇಲೆ ಸಮ್ಮೇಳನದ ಕಾರ್ಯಸೂಚಿ ಕೇಂದ್ರೀಕೃತವಾಗಿದೆ. ಈ ಬೇಡಿಕೆಗಳು ರಾಜ್ಯದ ಪ್ರಸ್ತುತ ಕಾರ್ಮಿಕ ನೀತಿಗಳಿಗೆ ಮೂಲಭೂತವಾದ ಸವಾಲನ್ನು ಒಡ್ಡಿವೆ’ ಎಂದರು.
‘ಏಳು ವರ್ಷಗಳಿಂದ ವೇತನ ಪರಿಷ್ಕರಣೆಯಾಗದೇ ಒಂದೂವರೆ ಕೋಟಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಬೆಲೆ ಏರಿಕೆ ಮತ್ತು ಕೆಲಸದ ಒತ್ತಡವನ್ನು ಆಧರಿಸಿ, ಕನಿಷ್ಠ ವೇತನವನ್ನು ₹36ಸಾವಿರಕ್ಕೆ ನಿಗದಿಪಡಿಸಬೇಕು. ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿನ ಶೇ 50-60ರಷ್ಟು ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರನ್ನು ಶೋಷಣೆಯಿಂದ ಮುಕ್ತಗೊಳಿಸಿ, ವಿಶೇಷ ಕಾನೂನಿನ ಮೂಲಕ ಅವರನ್ನು ಕಾಯಂಗೊಳಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.