ADVERTISEMENT

ಶಕ್ತಿ ಪ್ರದರ್ಶನ: ಸಿಗುವುದೇ ಸಚಿವ ಸ್ಥಾನ?

ಅರಸೀಕೆರೆಗೆ ಇಂದು ಸಿಎಂ, ಡಿಸಿಎಂ, ಸಚಿವರ ದಂಡು: 60 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 5:59 IST
Last Updated 26 ಜುಲೈ 2025, 5:59 IST
ಅಭಿನಂದನಾ ಸಮಾವೇಶದ ಅಂಗವಾಗಿ ಅರಸೀಕೆರೆ ತಾಲ್ಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಬೃಹತ್‌ ಪೆಂಡಾಲ್‌
ಅಭಿನಂದನಾ ಸಮಾವೇಶದ ಅಂಗವಾಗಿ ಅರಸೀಕೆರೆ ತಾಲ್ಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಬೃಹತ್‌ ಪೆಂಡಾಲ್‌   

ಹಾಸನ: ಅರಸೀಕೆರೆಯಲ್ಲಿ ಶನಿವಾರ ನಡೆಯಲಿರುವ ಅಭಿನಂದನಾ ಸಮಾವೇಶ ಹಾಗೂ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮದ ಮೇಲೆ ಜಿಲ್ಲೆಯ ಜನರ ಗಮನ ಕೇಂದ್ರಿಕೃತವಾಗಿದೆ. ‌

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಸಚಿವ ಸಂಪುಟದ ಬಹುತೇಕ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಮೂಲಕ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡರು ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ.

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟೇ, ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರಿದ್ದ ಕೆ.ಎಂ. ಶಿವಲಿಂಗೇಗೌಡರು, ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಮೊದಲ ಹಂತದಲ್ಲಿಯೇ ಸಚಿವ ಸ್ಥಾನ ಸಿಕ್ಕೇ ಬಿಟ್ಟಿತು ಎನ್ನುವಷ್ಟರಲ್ಲಿ ಕೈತಪ್ಪಿತ್ತು. ಸಚಿವ ಸ್ಥಾನದ ಬದಲು ಗೃಹ ಮಂಡಳಿ ಅಧ್ಯಕ್ಷ ಸ್ಥಾನವನ್ನು ಅವರಿಗೆ ನೀಡಲಾಗಿದೆ.

ADVERTISEMENT

‌ಆದರೆ, ಜಿಲ್ಲಾ ಉಸ್ತುವಾರಿ ಸಚಿವನಾಗಬೇಕು ಎನ್ನುವ ಶಿವಲಿಂಗೇಗೌಡರ ಹಂಬಲ ಮಾತ್ರ ಕಡಿಮೆಯಾಗಿಲ್ಲ. ಈಚೆಗೆ ಚನ್ನರಾಯಪಟ್ಟಣದಲ್ಲಿ ನಡೆದ ಕಾಂಗ್ರೆಸ್ ‘ಯುವ ಪರ್ವ’ ಕಾರ್ಯಕ್ರಮದಲ್ಲಿ ‘ಜಿಲ್ಲೆಯವರಿಗೆ ಸಚಿವ ಸ್ಥಾನ ಕೊಟ್ಟು ನೋಡಿ, ಸಂಘಟನೆಗೆ ಹೇಗೆ ಮಾಡುತ್ತೇವೆ’ ಎಂದು ಹೇಳುವ ಮೂಲಕ ಜಿಲ್ಲೆಯ ಏಕೈಕ ಶಾಸಕರಾದ ತಮಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಸಿದ್ದ‌‌ರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಸಮಾನ ಬಾಂಧವ್ಯ ಹೊಂದಿದ್ದು, ಅದಕ್ಕಾಗಿಯೇ ಅವರಿಗೆ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇದೀಗ ಅಭಿನಂದನಾ ಸಮಾವೇಶದಲ್ಲಿ ಜನರ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಚುನಾವಣೆಯ ಪ್ರಚಾರದ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರು, ಶಿವಲಿಂಗೇಗೌಡರನ್ನು ಸಚಿವರನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಚುನಾವಣೆಯ ನಂತರ ಪರಿಸ್ಥಿತಿ ಬದಲಾಗಿದ್ದು, ಜಿಲ್ಲೆಯಿಂದ ಏಕೈಕ ಕಾಂಗ್ರೆಸ್‌ ಶಾಸಕರಾಗಿ ಶಿವಲಿಂಗೇಗೌಡರು ಆಯ್ಕೆಯಾಗಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ಕೊಟ್ಟರೆ, ನಾಲ್ಕೈದು ಶಾಸಕರನ್ನು ಹೊಂದಿರುವ ಜಿಲ್ಲೆಗಳಿಂದಲೂ ಒತ್ತಡ ಬರಲಿದೆ ಎನ್ನುವ ಆತಂಕ ಪಕ್ಷದ ನಾಯಕರದ್ದಾಗಿದೆ. ಹಾಗಾಗಿ ಸದ್ಯಕ್ಕೆ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಕಡಿಮೆ ಎನ್ನುವ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

‘ಸಿಎಂಗೆ ನೈತಿಕೆ ಇದೆಯೇ’

‘ಅರಸೀಕೆರೆಯಲ್ಲಿ ಹಮ್ಮಿಕೊಂಡಿರುವ ಸಮಾವೇಶದ ವೆಚ್ಚ ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ’ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಆಗ್ರಹಿಸಿದರು. ಹಾಸನ ಜಿಲ್ಲೆಗೆ ಇದುವರೆಗೆ ಕನಿಷ್ಠ ಅನುದಾನ ಬಿಡುಗಡೆ ಮಾಡದೇ ಇಡೀ ಸರ್ಕಾರವೇ ಸಮಾವೇಶಕ್ಕೆ ಜಿಲ್ಲೆಗೆ ಬರುತ್ತಿರುವುದು ಎಷ್ಟು ಸರಿ? ಸಮಾವೇಶ ಹಮ್ಮಿಕೊಳ್ಳಲು ಮುಖ್ಯಮಂತ್ರಿಗಳಿಗೆ ಯಾವ ನೈತಿಕತೆ ಇದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು. ಜುಲೈ 26ರಂದು ನಡೆಯುವ ಸಮಾವೇಶ ಹೆಸರಿಗೆ ಮಾತ್ರ ಸರ್ಕಾರಿ ಕಾರ್ಯಕ್ರಮ. ಆದರೆ ಅಧಿಕಾರಿಗಳಿಂದ ಹಾಗೂ ಇತರರಿಂದ ಹಣ ವಸೂಲಿ ಮಾಡಿ ಸಮಾವೇಶ ರೂಪಿಸಲಾಗುತ್ತದೆ ಎಂದು ದೂರಿದರು. ಹಿಂದಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಎಚ್.ಡಿ. ಕುಮಾರಸ್ವಾಮಿ ನೀಡಿದ ಅನುದಾನದಡಿ ಕೆಲ ಕಾಮಗಾರಿಗಳಿಗೆ ಅರಸೀಕೆರೆಯಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು. ‘ಸಮಾವೇಶಕ್ಕೆ ಪ್ರತಿ ತಾಲ್ಲೂಕಿಗೆ 50 ಬಸ್ ಬಿಡಲಾಗುತ್ತಿದೆ. ಇಷ್ಟೊಂದು ಹಣ ವೆಚ್ಚ ಮಾಡುವ ಬದಲು ಜಿಲ್ಲೆಯಲ್ಲಿ ಗುಂಡಿ ಬಿದ್ದಿರುವ ರಸ್ತೆ ನನೆಗುದಿಗೆ ಬಿದ್ದಿರುವ ಕಾಮಗಾರಿ ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ಈ ಹಣವನ್ನು ವಿತರಿಸಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.