ಸಕಲೇಶಪುರ: ಪಶ್ಚಿಮಘಟ್ಟದ ನಿತ್ಯ ಹರಿದ್ವರ್ಣ ಮಳೆಕಾಡು ಪರಿಸರದ ಮಲೆನಾಡಿನ ಮೂಕನಮನೆ ಜಲಪಾತ ನಿಸರ್ಗ ಸೌಂದರ್ಯ ಸವಿಯಲು ಬರುವ ಹಲವು ಪ್ರವಾಸಿಗರಿಗೆ ಕುಡುಕರ ಆಟ ಮುಜುಗರ, ಬೇಸರ ಉಂಟು ಮಾಡುತ್ತಿದೆ.
ಭೋರ್ಗರೆಯುವ ಜಲಪಾತ ಕಣ್ತುಂಬಿಕೊಂಡು, ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ಸಂತಸದಿಂದ
ಹೋದರೆ ತೊಂದರೆ ಇಲ್ಲ. ಆದರೆ, ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಿ ಜಲಪಾತದ ಬಳಿ ಕುಡಿದು, ಕೂಗಾಡುತ್ತಾರೆ. ಪ್ಲಾಸ್ಟಿಕ್ ಹಾಗೂ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಪರಿಸರದ ಸೌಂದರ್ಯ ಹಾಳು ಮಾಡುತ್ತಿದ್ದಾರೆ.
ನಿತ್ಯ ಗಾಯಗೊಳ್ಳುವ ಪ್ರವಾಸಿಗರು: ಒಡೆದ ಬಾಟಲಿಗಳ ಗಾಜು ಪ್ರವಾಸಿಗರ ಕಾಲಿಗೆ ಚುಚ್ಚಿಕೊಂಡು ಪ್ರವಾಸವೇ ಸಾಕು ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗು ತ್ತಿದ್ದಾರೆ. ನೀರಿನ ಒಳಗೂ ಬಾಟಲಿ ಎಸೆಯುತ್ತಿದ್ದಾರೆ. ಈಚೆಗೆ ಬೆಂಗಳೂರಿ ನಿಂದ ಬಂದಿದ್ದ ಪ್ರವಾಸಿಗರೊಬ್ಬರ 10 ವರ್ಷದ ಬಾಲಕಿಯ ಪಾದ ಸೀಳಿ 8 ಹೊಲಿಗೆ ಹಾಕಲಾಗಿತ್ತು.
ನಿತ್ಯ ಇಂಥ ಘಟನೆಗಳು ನಡೆಯುತ್ತಲೇ ಇವೆ ಎಂದು ಹೊಂಗಡಹಳ್ಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಹಾವಳಿ ತಡೆಯಬೇಕು: ಜಲಪಾತ ಅಕ್ಕಪಕ್ಕದಲ್ಲಿ ವಾಸಕ್ಕೆ ಮನೆಗಳಿಲ್ಲ. ಹೀಗಾಗಿ, ನಿತ್ಯವೂ ಕೆಲ ಕಿಡಿಗೇಡಿಗಳು ಜಲಪಾತಕ್ಕೆ ಇಳಿದು ಅಲ್ಲಿಯೇ ಮದ್ಯ ಸೇವಿಸಿ ಚೀರಾಡುತ್ತಾರೆ, ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಪ್ರವಾಸಿಗರು ದೂರುತ್ತಾರೆ.
ಮಹಿಳೆಯರು, ಮಕ್ಕಳು, ಕುಟುಂಬದ ಸದಸ್ಯರು ಜಲಪಾತದ ಹತ್ತಿರಕ್ಕೆ ಹೋಗುವುದಕ್ಕೆ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಪ್ರವಾಸಿಗರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.