ADVERTISEMENT

ಬೇಲೂರು: ಇಂಗ್ಲಿಷ್‌ ನಾಮಫಲಕ ತೆರವುಗೊಳಿಸಿದ ಪುರಸಭೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 14:43 IST
Last Updated 30 ಅಕ್ಟೋಬರ್ 2023, 14:43 IST
ಬೇಲೂರಿನಲ್ಲಿ ಇಂಗ್ಲಿಷ್ ಭಾಷೆ ನಾಮಫಲಕ ತೆರವೊಳಿಸುವ ವೇಳೆ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್,  ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್ ಇದ್ದರು
ಬೇಲೂರಿನಲ್ಲಿ ಇಂಗ್ಲಿಷ್ ಭಾಷೆ ನಾಮಫಲಕ ತೆರವೊಳಿಸುವ ವೇಳೆ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್,  ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್ ಇದ್ದರು   

ಬೇಲೂರು: ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕೆಂದು ಪಟ್ಟಣದಾದ್ಯಂತ ಇಂಗ್ಲಿಷ್‌  ಬಾಷೆಯಲ್ಲಿರುವ ನಾಮ ಫಲಕಗಳನ್ನು ತೆರವುಗೊಳಿಸುತಿದ್ದೇವೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.

ಇಲ್ಲಿನ ನೆಹರೂ ನಗರದಲ್ಲಿ ವಿವಿಧ ಕಟ್ಟಡಗಳ ಮೇಲಿದ್ದ ಇಂಗ್ಲಿಷ್‌ ನಾಮ ಫಲಕಗಳನ್ನು ಸೋಮವಾರ ಕರವೇ ಕಾರ್ಯಕರ್ತರೊಂದಿಗೆ ತೆರವುಗೊಳಿಸಿ ಮಾತನಾಡಿದರು.

ಬೇಲೂರು ವಿಶ್ವ ವಿಖ್ಯಾತ ಪ್ರವಾಸಿ ತಾಣ, ಮತ್ತು ಕನ್ನಡದ ಪಪ್ರಥಮ ಶಿಲಾ ಶಾಸನ ದೊರೆತ ತಾಲ್ಲೂಕು ಆಗಿವುರುದು ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿ. ಆದರೆ ಪಟ್ಟಣದಲ್ಲಿ ಇಂಗ್ಲಿಷ್‌ ನಾಮಫಲಕಗಳು ರಾರಾಜಿಸುತ್ತಿದ್ದು, ನವೆಂಬರ್ 1 ರಂದು ರಾಜ್ಯೋತ್ಸವವನ್ನು ಆಚರಿಸುತ್ತಿರುವುದರಿಂದ ಇಂಗ್ಲಿಷ್ ಫಲಕ ತೆರವುಗೊಳಿಸುವಂತೆ ಕರವೇ (ನಾರಾಯಣಗೌಡ) ಬಣದ ಪದಾಧಿಕಾರಿಗಳು ಮನವಿ ಮಾಡಿದ್ದರು. ಪುರಸಭೆಯಿಂದ ಅನುಮತಿ ಪಡೆಯದೆ ಫಲಕಗಳನ್ನು ಹಾಕಿದ್ದರಿಂದ ಅವುಗಳನ್ನು ನಮ್ಮ ಸಿಬ್ಬಂದಿಯೊಂದಿಗೆ ತೆರಳಿ ತೆರವುಗೊಳಿಸಿದ್ದೇವೆ. ಕನ್ನಡ ನಾಡಿನಲ್ಲಿ ಯಾವುದೇ ನಾಮ ಫಲಕ ಅಳವಡಿಸಿದರೂ ಕನ್ನಡದ ಅಕ್ಷರಗಳು ದೊಡ್ಡ ಅಕ್ಷರಗಳಲ್ಲಿ ಕಾಣುವಂತಿರಬೇಕು. ನಂತರ ಬೇರೆ ಭಾಷೆಗಳಲ್ಲಿ ಹಾಕಿ ಕೊಳ್ಳಲಿ ನಮ್ಮ ಅಭ್ಯಂತರವಿಲ್ಲ ಎಂದರು.

ADVERTISEMENT

ಕರವೇ (ನಾರಾಯಣಗೌಡ) ಬಣದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಪ್ರವಾಸಿ ಕೇಂದ್ರ ಬೇಲೂರು ಪಟ್ಟಣದಲ್ಲಿ ಎಲ್ಲಿ ನೋಡಿದರೂ ಆಂಗ್ಲ ಬಾಷೆಯ ನಾಮ ಫಲಕಗಳೆ ಎದ್ದು ಕಾಣುತಿದ್ದವು. ಇದನ್ನು ತೆರವುಗೊಳಿಸುವಂತೆ ಪುರಸಭೆ ಅಧ್ಯಕ್ಷರಿಗೆ ಮನವಿ ಮಾಡಿದ್ದರಿಂದ ಅಧ್ಯಕ್ಷೆ ತೀರ್ಥಕುಮಾರಿ, ಖುದ್ದಾಗಿ ಸಿಬ್ಬಂದಿಯೊಂದಿಗೆ ಆಗಮಿಸಿ ನಾಮ ಫಲಕ ತೆರವುಗೊಳಿಸಿದ್ದಾರೆ. ಸರ್ಕಾರದ ಆದೇಶದಂತೆ ಫಲಕಗಳನ್ನು ಹಾಕುವಾಗ ಶೇಕಡಾ 70 ರಷ್ಟು ಕನ್ನಡಭಾಷೆಯಲ್ಲಿ ನಂತರ ಇತರೆ ಭಾಷೆಯನ್ನು ಉಪಯೋಗಿಸಬೇಕು. ಆದರೆ ಇದನ್ನು ಯಾರೂ ಪಾಲಿಸುತ್ತಿಲ್ಲ. ಮುಂದಿನ ಒಂದು ವಾರದಲ್ಲಿ ಇಂತಹ ನಾಮ ಫಲಕಗಳನ್ನು ತೆರವುಗೊಳಿಸದಿದ್ದಲ್ಲಿ ನಾವೇ ಅವುಗಳನ್ನು ತೆರವುಗೊಳಿ ಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪುರಸಭೆ ಉಪಾಧ್ಯಕ್ಷೆ ಸೌಮ್ಯ, ಸದಸ್ಯ ಪ್ರಭಾಕರ್, ಮುಖ್ಯಾಧಿಕಾರಿ ಸುಜಯ್ ಕುಮಾರ್, ಆರೋಗ್ಯಾಧಿಕಾರಿ ಜ್ಯೋತಿ, ಲೋಹಿತ್, ಕರವೇ ಗೌರವಾಧ್ಯಕ್ಷ ಕುಮಾರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್, ಉಪಾಧ್ಯಕ್ಷ ಮೋಹನ್, ಚಂದ್ರೇಗೌಡ, ಪದಾಧಿಕಾರಿಗಳಾದ ಪ್ರಸನ್ನ, ಸ್ವಾಮಿ, ವಸಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.