ADVERTISEMENT

ದಂಪತಿಯಿಂದ ಮಹಿಳೆಯ ಬರ್ಬರ ಹತ್ಯೆ

ಉದ್ರಿಕ್ತರಿಂದ ಆಟೊಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 14:40 IST
Last Updated 19 ಮಾರ್ಚ್ 2019, 14:40 IST

ಹಾಸನ: ಸಾಲದ ಹಣ ಕೊಡುವುದಾಗಿ ಹೇಳಿ ಮನೆಗೆ ಕರೆಸಿಕೊಂಡು ಮಹಿಳೆಯನ್ನು ದಂಪತಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ನಗರದ ಹೊರವಲಯದ ಬೀರನಹಳ್ಳಿ ಕೆರೆ ನಿವಾಸಿಯಾದ ಯೋಧನ ಪತ್ನಿ ಶಶಿಕಲಾ (28) ಮೃತರು. ರಮೇಶ್‌ ಹಾಗೂ ಪತ್ನಿ ತೇಜಾ ಎಂಬುವರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಭಾರತೀಯ ಸೇನೆಯಲ್ಲಿರುವ ಯೋಧ ಭೀಮರಾಜು ಅವರ ಪತ್ನಿ ಶಶಿಕಲಾ ₹ 2 ಲಕ್ಷ ಸಾಲವನ್ನು ತೇಜಾಗೆ ನೀಡಿದ್ದರು. ಸಾಲದ ಹಣ ನೀಡುವಂತೆ ಶಶಿಕಲಾ ಪದೇ ಪದೇ ಕೇಳುತ್ತಿದ್ದರು. ಈ ಸಂಬಂಧ ಭಾನುವಾರ ಸಂಜೆ ಮನೆಗೆ ಕರೆದು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.

ADVERTISEMENT

ಯಾರಿಗೂ ಗೊತ್ತಾಗಬಾರದು ಎಂಬ ಉದ್ದೇಶದಿಂದ ಗೋಣಿಚೀಲದಲ್ಲಿ ಹಾಕಿ ಬಚ್ಚಲು ಮನೆಯಲ್ಲಿಟ್ಟಿದ್ದರು. ಶಶಿಕಲಾ ಬಾರದ ಕಾರಣ ಕುಟುಂಬಸ್ಥರು ಮನೆ ಕಡೆ ಬಂದಾಗ ಬಚ್ಚಲು ಮನೆಯಿಂದ ರಕ್ತ ಸೋರುತ್ತಿರುವುದು ಕಂಡಿದೆ. ಇದರಿಂದ ಆತಂಕಗೊಂಡು ಒಳಪ್ರವೇಶಿಸಿ ಪರಿಶೀಲಿಸಿದಾಗ ಕೃತ್ಯವೆಸಗಿರುವುದು ಗೊತ್ತಾಗಿದೆ.

ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ರಮೇಶ್‌ಗೆ ಸೇರಿದ ಆಟೊ ಗೆ ಬೆಂಕಿ ಹಚ್ಚಿದರು. ಇದರಿಂದ ಕೆಲ ಕಾಲ ಆತಂಕ ವಾತಾವರಣ ನಿರ್ಮಾಣವಾಗಿತ್ತು.
ಶಶಿಕಲಾಗೆ ಇಬ್ಬರು ಮಕ್ಕಳಿದ್ದಾರೆ. ಸ್ಥಳಕ್ಕೆ ಪೊಲೀಸ್‌ ವರಿಷ್ಠಾಧಿಕಾರಿ ಎ.ಎನ್‌.ಪ್ರಕಾಶ್‌ ಗೌಡ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.