ಚನ್ನರಾಯಪಟ್ಟಣ: ಕಳೆದವಾರ ಯುವಕನನ್ನು ಹಾಡುಹಗಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಮೇಗಲಕೇರಿಯ ನಿಖಿಲ್, ಶಿವಕುಮಾರ್, ಗೂರನಹಳ್ಳಿಯ ಶೇಖರ್, ವಿನೋದ್ ಬಂಧಿತ ಆರೋಪಿಗಳು.
ನಿಖಿಲ್, ಶಿವಕುಮಾರ್ನನ್ನು ಕೆ.ಆರ್. ಪೇಟೆಯಲ್ಲಿ ಸೋಮವಾರ ಬಂಧಿಸಲಾಯಿತು. ಶೇಖರ್ ಮತ್ತು ವಿನೋದ್ ಕಳೆದ ಶನಿವಾರ ನ್ಯಾಯಾಲಯಕ್ಕೆ ಶರಣಾಗಿದ್ದರು. ಹೆಚ್ಚಿನ ವಿಚಾರಣೆಗಾಗಿ ಅವರಿಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಕೊಲೆ ನಡೆದ ಸ್ಥಳಕ್ಕೆ ಪೊಲೀಸರು ಸೋಮವಾರ ನಾಲ್ವರು ಆರೋಪಿಗಳನ್ನು ಕರೆತಂದು ಮಾಹಿತಿ ಪಡದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
’15 ದಿನಗಳ ಹಿಂದೆ ಗೂರನಹಳ್ಳಿಯ ಗಣಪತಿ ಪೆಂಡಾಲ್ ನಲ್ಲಿ ವೇಳೆ ಹಾಡು ಬದಲಾಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮೃತ ಅಭಿಜಿತ್ ಹಾಗೂ ಆರೋಪಿಗಳ ನಡುವೆ ಗಲಾಟೆ ನಡೆದಿತ್ತು. ಆದಾದ ಬಳಿಕ ಆರೋಪಿಗಳ ಮನೆಯ ಹತ್ತಿರ ಹೋಗಿ ಅಭಿಜಿತ್ ಗಲಾಟೆ ಮಾಡಿ, ನಿಂದಿಸಿದ್ದನು. ಇದರಿಂದ ಸಿಟ್ಟಾದ ನಾಲ್ವರು ಯುವಕರು, ಅಭಿಜಿತ್ನನ್ನು ಕಳೆದ ವಾರ ಪಟ್ಟಣದಲ್ಲಿ ಕೊಲೆ ಮಾಡಿದ್ದರು ಎಂದು ಡಿವೈಎಸ್ಪಿ ಬಿ.ಬಿ.ಲಕ್ಷ್ಮೇಗೌಡ ಸೋಮವಾರ ತಿಳಿಸಿದರು.
ಪ್ರಕರಣ ಭೇದಿಸಿದ ಸಿಪಿಐ ಎಚ್.ಎಂ.ಕಾಂತರಾಜು, ಪಟ್ಟಣ ಠಾಣೆಯ ಪಿಎಸ್ಐ ಕಿರಣ್ ಕುಮಾರ್, ಹಿರೀಸಾವೆ ಠಾಣೆಯ ಪಿಎಸ್ಐ ಗಿರೀಶ್ ಮತ್ತು ಸಿಬ್ಬಂದಿಯ ಕಾರ್ಯವನ್ನು ಲಕ್ಷ್ಮೇಗೌಡ ಶ್ಲಾಘಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.