ಚನ್ನರಾಯಪಟ್ಟಣ: ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಿರುವ ಘಟನೆ ಡಿ.ಕಾಳೇನಹಳ್ಳಿಯಲ್ಲಿರುವ ಮಂಚಿಕಟ್ಟೆ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಯಾಚೇನಹಳ್ಳಿಯ ಆನಂದ್ (24) ಕೊಲೆಯಾದ ಯುವಕ.
ಆರೋಪಿಗಳಾದ ಡಿ.ಕಾಳೇನಹಳ್ಳಿಯ ಪುನೀತ್, ಕಾರ್ತಿಕ, ವಿಜಯ್, ಚೇತನ್ ಹಾಗೂ ಗೌತಮ್ ಸೇರಿ ಇತರರು ತಲೆ ಮರೆಸಿಕೊಂಡಿದ್ದಾರೆ.
ಮಂಗಳವಾರ ಸಂಜೆ ಆರೋಪಿಗಳು ಮತ್ತು ಆನಂದನ ನಡುವೆ ಜಗಳ ನಡೆದಿತ್ತು. ಇದಾದ ಬಳಿಕ ರಾತ್ರಿ 10.45 ರಲ್ಲಿ ಅನಂದ್ ತನ್ನ ಸ್ನೇಹಿತ ರವಿ ಜೊತೆ ಬೈಕ್ನಲ್ಲಿ ಚನ್ನರಾಯಪಟ್ಟಣದಿಂದ ಊರಿಗೆ ತೆರಳುತ್ತಿದ್ದನು. ಕಾಳೇನಹಳ್ಳಿಯ ಹತ್ತಿರ ಇರುವ ಮಂಚಿಕಟ್ಟೆ ಬಳಿ ಆರೋಪಿಗಳು ಆನಂದ್ ಮತ್ತು ರವಿ ಅವರನ್ನು ತಡೆದಿದ್ದಾರೆ. ನಮ್ಮ ಜೊತೆ ಜಗಳ ಮಾಡುತ್ತೀಯಾ ಎಂದು ಆನಂದನನ್ನು ಅವಾಚ್ಯ ಪದಗಳಿಂದ ನಿಂದಿಸಿ ಚಾಕುವಿನಿಂದ ಕುತ್ತಿಗೆ, ಎದೆಗೆ ಚುಚ್ಚಿದ್ದಾರೆ. ಆನಂದ್ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಕಳೆದ 4 ತಿಂಗಳ ಹಿಂದೆ ಬಾಗೂರಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆನಂದ್ ಭಾಗಿಯಾಗಿ ಜೈಲು ಸೇರಿದ್ದನು. ಈಚೆಗೆ ಜಾಮೀನಿನ ಮೇಲೆ ಹೊರಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.