ಹಾಸನ : ತಾಲ್ಲೂಕಿನ ಸಾಲಗಾಮೆಯ ಬೂದೇಶ್ವರ ಮಠದಲ್ಲಿ ಡಿ. 29ರಂದು ವಿಶ್ವ ಮಾನವ ದಿನಾಚರಣೆ ಅಂಗವಾಗಿ ಸಾಲಗಾಮೆ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಹೇಳಿದರು.
ಅಂದು ಬೆಳಗ್ಗೆ 8.30ಕ್ಕೆ ಧ್ವಜಾರೋಹಣ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಂತರ ಸಮ್ಮೇಳನದ ಸರ್ವಾಧ್ಯಕ್ಷ ಸಾಲು ಮರದ ಪೊಲೀಸ್ ಕಾನ್ಸ್ಟೆಬಲ್ ವೈ.ಬಿ.ಕಾಂತರಾಜು ಅವರನ್ನು ಕಲಾ ತಂಡಗಳೊಂದಿಗೆ ಬೆಳ್ಳಿ ಸಾರೋಟಿನಲ್ಲಿ ನಿಟ್ಟೂರು ವೃತ್ತದಿಂದ ವೇದಿಕೆಗೆ ಕರೆದೊಯ್ಯಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ವೇದಿಕೆ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜು, ಹಲವು ಸಾಹಿತಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ನಡೆಯುವ ವಿಚಾರ ಗೋಷ್ಠಿಯಲ್ಲಿ ‘ಬರಗಾಲವನ್ನ ಶಾಶ್ವತವಾಗಿ ಎದುರಿಸಲು ವ್ಯಾಪಕ ಅರಣ್ಯೀಕರಣವೇ ಒಂದು ಪರಿಹಾರ’ ಎಂಬ ವಿಷಯ ಕುರಿತು ಪರಿಸರ ಪ್ರೇಮಿ ಕಿಶೋರ್ ಕುಮಾರ್ ವಿಷಯ ಮಂಡಿಸುವರು. ‘ಕೆರೆಕಟ್ಟೆಗಳ ಸಂರಕ್ಷಣೆಯೇ ಗ್ರಾಮಾಭ್ಯುದಯಕ್ಕೆ ಪ್ರೇರಕ ಮತ್ತು ಪೂರಕ’ ಎಂಬ ವಿಷಯ ಕುರಿತು ವಿಚಾರವಾದಿ ಅಹಮ್ಮದ್ ಹಗರೆ ವಿಚಾರ ಮಂಡನೆ ಮಾಡುವರು’ ಎಂದು ವಿವರಿಸಿದರು.
ಮಧ್ಯಾಹ್ನ 3 ಗಂಟೆಗೆ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಶಿಲಾ ಸೋಮಶೇಖರ್ ವಹಿಸುವರು. ಕವಿಗಳಾದ ಗ್ಯಾರಂಟಿ ರಾಮಣ್ಣ, ಪರಮೇಶ್, ಉಮೇಶ್, ವಾಸು, ವೇದಶ್ರೀರಾಜು, ವಾಣಿ ಮಹೇಶ್, ಕಲಾವತಿ ಮಧುಸೂದನ್, ನಾಗರಾಜ್ ದೊಡ್ಡಮನಿ, ದ್ಯಾವನೂರು ಮಂಜುನಾಥ್, ಕುಮಾರ್ ಛಲವಾದಿ, ಗುರುನಂಜೇಶ್, ವನಜಾ ಸುರೇಶ್, ಕೆ.ಸಿ.ಗೀತಾ, ರಾಜೇಶ್ ಬಿ.ಹೊನ್ನೇನಹಳ್ಳಿ ಕವನ ವಾಚನ ಮಾಡುವರು ಎಂದು ತಿಳಿಸಿದರು.
ಸಂಜೆ 5 ಗಂಟೆಗೆ ನಡೆಯುವ ಸಮರೋಪ ಸಮಾರಂಭದಲ್ಲಿ ಶಾಸಕ ಪ್ರೀತಂ ಜೆ.ಗೌಡ, ಎವಿಕೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಸಿ.ಚ.ಯತೀಶ್ವರ್, ಸಾಲಗಾಮೆ ಹೋಬಳಿ ಅಧ್ಯಕ್ಷ ಗೌಡಗೆರೆ ಪ್ರಕಾಶ್ ಭಾಗವಹಿಸುವರು. ಚಲನಚಿತ್ರ ನಟ ಪ್ರಥಮ್ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಗುವುದು. ಸಂಜೆ 7 ರಿಂದ 9ರ ವರೆಗೆ ವಿವಿಧ ಸಾಂಸ್ಕತಿಕ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಒ.ಮಹಾಂತಪ್ಪ, ಯಲಗುಂದ ಶಾಂತಕುಮಾರ್, ಶಿವಕುಮಾರಸ್ವಾಮಿ, ವೈ.ಎಸ್.ರಮೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.