ಹಾಸನ: ತಾಲ್ಲೂಕಿನ ಗಾಡೇನಹಳ್ಳಿ– ಹಾಸನ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ಲಾಡ್ಜ್ನಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಸ್ತ್ರೀ ಶಕ್ತಿಸ್ವ-ಸಹಾಯ ಸಂಘದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗಾಡೇನಹಳ್ಳಿ ಗ್ರಾಮದಲ್ಲಿ ಲೀಲಾ ಕುಮಾರ್ ಅವರು ಲಾಡ್ಜ್ ನಿರ್ಮಿಸಿ, ಮದ್ಯದ ಅಂಗಡಿ ತೆರೆಯಲು ಪರವಾನಗಿ ನೀಡುವಂತೆ ಕೋರಿ ಅಬಕಾರಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.ಇಲ್ಲಿ ಮದ್ಯದ ಅಂಗಡಿ ತೆರೆಯುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದುಆರೋಪಿಸಿದರು.
ವಿದ್ಯಾರ್ಥಿಗಳು, ಸಾರ್ವಜನಿಕರು, ಮಹಿಳೆಯರು ನಿತ್ಯ ಓಡಾಡುವ ರಸ್ತೆ ಇದಾಗಿದ್ದು, ಶಾಂತಿ ಭಂಗವಾಗುವ ಸಾಧ್ಯತೆ ಇದೆ. ಗ್ರಾಮದಲ್ಲಿ 50 ವರ್ಷಗಳಿಂದ ಯಾವುದೇ ಮದ್ಯದ ಅಂಗಡಿ ತೆರೆಯಲುಗ್ರಾಮಸ್ಥರು ಅವಕಾಶ ನೀಡಿಲ್ಲ. ಸುಮಾರು 200 ಮನೆಗಳಿದ್ದು, ಮಹಿಳೆಯರು, ಮಕ್ಕಳು,ಪುರುಷರು ಕುಡಿತದಂತಹ ದುಶ್ಚಟಗಳಿಂದ ದೂರವಿದ್ದು, ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಎಂದುತಿಳಿಸಿದರು.
ಇಲ್ಲಿರುವ ಪುರಾತನ ಕಾಲದ ಚರ್ಚ್ಗೆ ಸಾವಿರಾರು ಹೆಣ್ಣು ಮಕ್ಕಳು ಪ್ರಾರ್ಥನೆಗಾಗಿ ಇದೇ ಮಾರ್ಗದಲ್ಲಿ ಸಾಗುತ್ತಾರೆ. ಮದ್ಯದ ಅಂಗಡಿ ತೆರೆಯುವುದರಿಂದ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರಿಗೂ ತೊಂದರೆಉಂಟಾಗುತ್ತದೆ. ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದುಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕ್ರೈಸ್ತ ಒಕ್ಕೂಟದ ಮಾಜಿ ಅಧ್ಯಕ್ಷ ಥಾಮಸ್, ಪುಷ್ಪ ಮೇರಿ, ಲತಾ, ನಕ್ಷತ್ರ ಮೇರಿ, ರತ್ನ, ರಜಿನಿ ಹಾಗೂ ಗ್ರಾಮದ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘದ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.