ಚನ್ನರಾಯಪಟ್ಟಣ: ತಾಲ್ಲೂಕಿನ ಬನವಾಸೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತನ್ನನ್ನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು, ₹ 1.27 ಲಕ್ಷ ವಂಚನೆ ಮಾಡಿದ್ದಾನೆ.
ಭೈರಶೆಟ್ಟಿ ಎಂಬುವವರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿದ್ದು, ಸಾತೇನಹಳ್ಳಿ ಕೆನರಾ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾರೆ. ಗುರುವಾರ ಬೆಳಿಗ್ಗೆ ಮೊಬೈಲ್ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ‘ನಾನು ಕೆನರಾ ಬ್ಯಾಂಕಿನ ಮ್ಯಾನೇಜರ್. ನಿಮ್ಮ ಎಟಿಎಂ ಅವಧಿ ಮುಗಿದಿದೆ. ಅದನ್ನು ಸರಿ ಮಾಡಬೇಕು. ನಾವು ಒಟಿಪಿ ಕಳುಹಿಸುತ್ತೇವೆ. ಅದನ್ನು ಹೇಳಿ’ ಎಂದು ತಿಳಿಸಿದ್ದಾನೆ.
ಅದನ್ನು ನಂಬಿದ ಭೈರಶೆಟ್ಟಿ, ಮೊಬೈಲ್ಗೆ ಬಂದ ಒಟಿಪಿ ಹೇಳಿದ್ದಾರೆ. ಆಗ ಬ್ಯಾಂಕ್ ಖಾತೆಯಲ್ಲಿದ್ದ ₹ 1,27,898 ಹಣ ಕಡಿತವಾಗಿದೆ. ಕೂಡಲೇ ಅಪರಿಚಿತ ವ್ಯಕ್ತಿಯ ಮೊಬೈಲ್ಗೆ ಕರೆ ಮಾಡಿದ್ದು, ಅದು ಸ್ವಿಚ್ಆಫ್ ಆಗಿತ್ತು. ಸಾತೇನಹಳ್ಳಿ ಕೆನರಾ ಬ್ಯಾಂಕ್ ಮ್ಯಾನೇಜರ್ ಅವರನ್ನು ಭೇಟಿ ಮಾಡಿ ವಿಚಾರಿಸಿದ್ದು, ಅವರು ಕರೆ ಮಾಡಿಲ್ಲವೆಂದು ತಿಳಿಸಿದ್ದಾರೆ.
ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡಲಾಗಿದೆ ಎಂದು ಭೈರಶೆಟ್ಟಿ ಅವರು ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.