ADVERTISEMENT

ಪೊಲೀಸ್‌ ಕಿರುಕುಳ ಖಂಡಿಸಿ ಪಿಎಫ್‌ಐ ಪ್ರತಿಭಟನೆ‌

ಮಹಿಳೆಯರು, ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ಯೋಗಿ ಸರ್ಕಾರ ವಿಫಲ: ಆರೋಪ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 13:46 IST
Last Updated 24 ಫೆಬ್ರುವರಿ 2021, 13:46 IST
ಹಾಸನದ ಹೇಮಾವತಿ ಪ್ರತಿಮೆ ಬಳಿ ಪಿ.ಎಫ್‌.ಐ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಹಾಸನದ ಹೇಮಾವತಿ ಪ್ರತಿಮೆ ಬಳಿ ಪಿ.ಎಫ್‌.ಐ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.   

ಹಾಸನ: ಉತ್ತರ ಪ್ರದೇಶ ಪೊಲೀಸರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯರ್ತರನ್ನು
ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪಿಎಫ್‍ಐ ಸಂಘಟನೆ ವತಿಯಿಂದ
ಬುಧವಾರ ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.

ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಉತ್ತರ ಪ್ರದೇಶ ಪೊಲೀಸರು 15 ಜಿಲ್ಲೆಗಳಲ್ಲಿ ಪ್ರತಿಭಟನಕಾರರ
ಮೇಲೆ ಹಿಂಸಾಚಾರ ನಡೆಸಿ 23 ಅಮಾಯಕರನ್ನು ಹತ್ಯೆ ಮಾಡಿದ್ದರು. ಘಟನೆಯಲ್ಲಿ ನೂರಾರು ಮಂದಿ
ಗಾಯಗೊಂಡಿದ್ದರು. ಪೊಲೀಸ್‌ ಹಿಂಸಾಚಾರದ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಅಲಹಬಾದ್
ಹೈಕೋರ್ಟ್ ನಲ್ಲಿ ಸಂಘಟನೆಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದೆ. ಆದರೂ ಪೊಲೀಸರು
ಕಾರ್ಯಕರ್ತರು ಮತ್ತು ಅವರ ಕುಟುಂಬಸ್ಥರಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದರು.

ಮುಸ್ಲಿಮ್‌ರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ಸೇರಿದಂತೆ ಯೋಗಿ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು
ಎದುರಿಸುತ್ತಿದ್ದಾರೆ. ಅತ್ಯಾಚಾರ ಸಂತ್ರಸ್ತರು ಹಾಗೂ ವಿಶೇಷವಾಗಿ ಪರಿಶಿಷ್ಟರಿಗೆ ನ್ಯಾಯ
ನಿರಾಕರಿಸಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಿಸಲು, ಮಕ್ಕಳು ಮತ್ತು ಮಹಿಳೆಯರಿಗೆ ರಕ್ಷಣೆ
ನೀಡುವಲ್ಲಿ ಯೋಗಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

ರೈಲಿನಲ್ಲಿ ಯುಪಿ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಕೇರಳದ ಅನ್ಶಾದ್ ಮತ್ತು ಫಿರೋಜ್‌ ಎಂಬ ಯುವಕರನ್ನು
ಬಂಧಿಸಿದೆ. ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಇಬ್ಬರ ವಿರುದ್ಧ ಭಯೋತ್ಪಾದನಾ ದಾಳಿಗೆ
ಯೋಜನೆ ಮತ್ತು ತಯಾರಿಯ ಆರೋಪವನ್ನು ವಿಶೇಷ ಕಾರ್ಯಪಡೆ ತಂಡ ಹೊರಿಸಿದೆ ಎಂದು ಕಿಡಿಕಾರಿದರು.

ಅಮಾಯಕ ಕಾರ್ಯಕರ್ತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸದಿದ್ದರೆ ಸಂಘಟನೆ ವತಿಯಿಂದ
ದೇಶಾದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸೂಫಿ, ಯಾಸೀನ್, ಫರೀದ್, ಶಜೀಲ್ ಸೈಯಿಡ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.