ಅರಸೀಕೆರೆ: ‘ತಾಲ್ಲೂಕಿನಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಬಿಪಿಎಲ್ ಕುಟುಂಬಗಳಿಗೆ ಸರ್ಕಾರ ವಿತರಿಸುತ್ತಿರುವ ಕಡಲೆಕಾಳು ಕಳಪೆಯಾಗಿವೆ’ ಎಂದು ಮಾದಿಗ ದಂಡೋರ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎ.ಪಿ.ಚಂದ್ರಯ್ಯ ಆರೋಪಿಸಿದರು.
ತಾಲ್ಲೂಕಿನ ಅಗ್ಗುಂದ ಗ್ರಾಮದಲ್ಲಿ ಮಾತನಾಡಿದ ಅವರು, ‘ಬಡವರ ಬಗ್ಗೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ಕಳಪೆ ಕಡಲೆಕಾಳು ವಿಸ್ತರಿಸುತ್ತಿದೆ. ಇದು ಸರ್ಕಾರದ ತಪ್ಪಾ? ಅಥವಾ ನ್ಯಾಯಬೆಲೆ ಅಂಗಡಿ ಮಾಲೀಕರ ತಪ್ಪಾ? ಎಂಬುದನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.
‘ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುತ್ತಿರುವ ಕಡಲೆ ಕಾಳುಗಳು ಮೇಲ್ನೋಟಕ್ಕೆ ಕಾಳಿನಂತೆ ಕಾಣಿಸುತ್ತಿವೆ. ಆದರೆ ಇದರಲ್ಲಿ ಬರೀ ಸಿಪ್ಪೆಯೇ ಇವೆ. ಕಾಳಿನ ಅಂಶವೇ ಇಲ್ಲ. ಸರ್ಕಾರ ಕಳಪೆ ಕಡಲೆಕಾಳು ವಿತರಣೆಯನ್ನು ಕೂಡಲೇ ನಿಲ್ಲಿಸಿ, ಗುಣಮಟ್ಟದ ಕಾಳನ್ನು ವಿತರಿಸಬೇಕು. ಇಲ್ಲದಿದ್ದರೆ ತಾಲ್ಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿ ಹಾಗೂ ಸಂಬಂಧಿಸಿದ ಇಲಾಖೆಯ ಎದುರು ಈಗಾಗಲೇ ವಿತರಿಸಿದ ಕಳಪೆ ಕಡಲೇಕಾಳನ್ನು ಇಟ್ಟು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.