ADVERTISEMENT

ಪ್ರಭಾವಕ್ಕೆ ಒಳಗಾಗದೇ, ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿ: ಕಿಶೋರ್ ಚಂದ್ರ

ಪೊಲೀಸ್‌ ನಿರ್ಗಮನ ಪಥ ಸಂಚಲನದಲ್ಲಿ ಐಜಿಪಿ

​ಪ್ರಜಾವಾಣಿ ವಾರ್ತೆ
Published 6 ಮೇ 2019, 14:07 IST
Last Updated 6 ಮೇ 2019, 14:07 IST
ಹಾಸನದಲ್ಲಿ ನಡೆದ ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಐಜಿಪಿ ಕಿಶೋರ್‌ ಚಂದ್ರ ಅವರು ಉತ್ತಮ ಪ್ರಶಿಕ್ಷಣಾರ್ಥಿಗೆ ಬಹುಮಾನ ವಿತರಿಸಿದರು.
ಹಾಸನದಲ್ಲಿ ನಡೆದ ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಐಜಿಪಿ ಕಿಶೋರ್‌ ಚಂದ್ರ ಅವರು ಉತ್ತಮ ಪ್ರಶಿಕ್ಷಣಾರ್ಥಿಗೆ ಬಹುಮಾನ ವಿತರಿಸಿದರು.   

ಹಾಸನ: ಯಾವುದೇ ದುರಾಲೋಚನೆ ಹಾಗೂ ಪ್ರಭಾವಗಳಿಗೆ ಒಳಗಾಗದೇ ಧೈರ್ಯ ಮತ್ತು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವುದು ಸಮಾಜಕ್ಕೆ ಕೊಡುವ ಒಂದು ಕೊಡುಗೆ ಎಂದು ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಿಶೋರ್ ಚಂದ್ರ ಹೇಳಿದರು.

ಗಾಡೇನಹಳ್ಳಿ ಪೊಲೀಸ್ ತರಬೇತಿ ಶಾಲೆ ಕವಾಯತು ಮೈದಾನ ಆವರಣದಲ್ಲಿ ನಡೆದ 3ನೇ ತಂಡದ ನಾಗರಿಕ ಪೊಲೀಸ್ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿಗಳು ಸರ್ಕಾರದ ಸೇವೆಗೆ ಸದಾ ಸನ್ನದ್ಧರಾಗಿರಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ ಬಡತನದಲ್ಲಿರುವವರಿಗೆ ಕಾನೂನಾತ್ಮಕ ಸಹಾಯ ನೀಡಿದಲ್ಲಿ ಮಾತ್ರವೇ ಪಥಸಂಚಲನಕ್ಕೆ ಅರ್ಥ ಬರುತ್ತದೆ ಎಂದು ತಿಳಿಸಿದರು.

ADVERTISEMENT

ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುವವರು ಸಾರ್ವಜನಿಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಳ್ಳಬೇಕು. ಸಮಾಜಕ್ಕೆ ಸಾಕಷ್ಟು ಅಧಿಕಾರಿಗಳು ಕರ್ತವ್ಯ ನಿಷ್ಠೆ ಸೇವೆ ಸಲ್ಲಿಸಿದ್ದಾರೆ. ಅಂತಹ ಅಧಿಕಾರಿಗಳನ್ನು ಆದರ್ಶವಾಗಿಟ್ಟುಕೊಂಡು ಕೆಲಸ ನಿರ್ವಹಿಸುವಂತೆ ಕಿವಿಮಾತು ಹೇಳಿದರು.

ಪೊಲೀಸ್ ತರಬೇತಿ ಶಾಲೆಯ ಪ್ರಭಾರಿ ಪ್ರಾಂಶುಪಾಲರಾದ ನಂದಿನಿ ಮಾತನಾಡಿ, ಪ್ರಶಿಕ್ಷಾಣಾರ್ಥಿಗಳು 8 ತಿಂಗಳು ಯಶಸ್ವಿಯಾಗಿ ಒಳಾಂಗಣ ಮತ್ತು ಹೊರಾಂಗಣ ವಿಷಯದಲ್ಲಿ ಪಿಟಿ, ಕರಾಟೆ, ಲಾಠಿ ಡ್ರಿಲ್, ಗುಂಪು ಘರ್ಷಣೆ ನಿಯಂತ್ರಣ ಸೇರಿದಂತೆ ಇತರೆ ಕಾನೂನಾತ್ಮಕ ಹಾಗೂ ಉನ್ನತ ಮಟ್ಟದ ತರಬೇತಿ ಪಡೆದಿದ್ದಾರೆ ಎಂದು ವಿವರಿಸಿದರು.

ಕಾರವಾರ, ಮಂಗಳೂರು ನಗರ, ಬೆಳಗಾವಿ, ಚಿಕ್ಕಬಳ್ಳಾಪುರ, ಹಾಸನ ಸೇರಿದಂತೆ ಒಟ್ಟು 18 ಜಿಲ್ಲೆಗಳ ತರಬೇತಿ ಪಡೆದ ಒಟ್ಟು 392 ಪ್ರಶಿಕ್ಷಾಣಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ರಾಷ್ಟ್ರ ಧ್ವಜ ಹಾಗೂ ಪೊಲೀಸ್ ಧ್ವಜಗಳ ನಿರ್ಗಮನ ಪಥ ಸಂಚಲನವು ಗಮನ ಸೆಳೆಯಿತು.

ಪೊಲೀಸ್ ಮಹಾ ನೀರೀಕ್ಷಕ ಎಸ್‌.ರವಿ ಅವರು ಸ್ಮರಣ ಸಂಚಿಕೆ ಅನಾವರಣಗೊಳಿಸಿದರು. ಸರ್ವೋತ್ತಮ ಪ್ರಶಿಕ್ಷಾಣಾರ್ಥಿ ಕೃಷ್ಣಮೂರ್ತಿ ಕವಾಯತು ನಾಯಕತ್ವ ವಹಿಸಿದ್ದರು.

ಒಟ್ಟು 392 ಪ್ರಶಿಕ್ಷಾಣಾರ್ಥಿಗಳು ತರಬೇತಿ ಪಡೆದಿದ್ದು ಇವರಲ್ಲಿ 23 ಸ್ನಾತಕೋತ್ತರ ಪದವಿ, 25 ಬಿಎಸ್ಸಿ, 5 ಬಿ.ಇ, 262 ಪದವಿ, 4 ಡಿಪ್ಲೊಮಾ ಮತ್ತು 83 ಜನ ಪಿಯುಸಿ ಶಿಕ್ಷಣ ಪಡೆದಿದ್ದಾರೆ. ನಂದಿನಿ ಅವರು ಪ್ರಶಿಕ್ಷಾಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್, 11ನೇ ಪಡೆ ಕೆಎಸ್ಆರ್ ಪಿ ಕಮಾಂಡೆಂಟ್ ಕೃಷ್ಣಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶ ಬಸವರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.