ADVERTISEMENT

ಎಚ್‍ಪಿಸಿಎಲ್ ಟ್ಯಾಂಕರ್ ಚಾಲಕರ ಪ್ರತಿಭಟನೆ

ದೃಢಿಕೃತ ಪ್ರಮಾಣ ಪತ್ರಕ್ಕೆ ಕಂಪನಿ ಒತ್ತಾಯ: ಆರೋಪ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 13:29 IST
Last Updated 21 ನವೆಂಬರ್ 2020, 13:29 IST
ಹಾಸನ ಕೈಗಾರಿಕಾ ಪ್ರದೇಶದಲ್ಲಿರುವ ಎಚ್‌ಪಿಸಿಎಲ್‌ ಕಂಪನಿ ಎದುರು ಚಾಲಕರು ಪ್ರತಿಭಟನೆ ನಡೆಸಿದರು.
ಹಾಸನ ಕೈಗಾರಿಕಾ ಪ್ರದೇಶದಲ್ಲಿರುವ ಎಚ್‌ಪಿಸಿಎಲ್‌ ಕಂಪನಿ ಎದುರು ಚಾಲಕರು ಪ್ರತಿಭಟನೆ ನಡೆಸಿದರು.   

ಹಾಸನ: ನಗರದ ಎಚ್‍ಪಿಸಿಎಲ್ ಕಂಪನಿಯ ಆಡಳಿತ ಮಂಡಳಿ ಪೊಲೀಸ್‌ ವೆರಿಫಿಕೇಷನ್ ಪತ್ರ ತರುವಂತೆ ಪೀಡಿಸುತ್ತಿರುವುದರಿಂದ ಕೆಲಸಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ವಾಹನ ಚಾಲಕ ಹಾಗೂ ಕ್ಲೀನರ್‌ಗಳು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಪೊಲೀಸರಿಂದ ದೃಢಿಕೃತ ಪ್ರಮಾಣ ಪತ್ರ ತರುವುದು ಕಷ್ಟದ ಕೆಲಸವಾಗಿದೆ. ಯಾವುದೇ ಅಪಘಾತ ಪ್ರಕರಣಗಳಲ್ಲಿ ತಾವು ಸಿಲುಕಿಲ್ಲ. ವಾಹನ ಚಾಲನೆಯಲ್ಲಿ ಪರಿಣತಿ ಸಾಧಿಸಿದ್ದೇವೆ ಎಂದು ಹೇಳಿದರೂ ಅಧಿಕಾರಿಗಳು ಕೇಳುತ್ತಿಲ್ಲ ಎಂದು ದೂರಿದರು.

ವರ್ಷಕ್ಕೊಮ್ಮೆ ದೃಢಿಕೃತ ಪ್ರಮಾಣ ಪತ್ರ ತರಲು ಹೇಳುತ್ತಾರೆ. ಒಟ್ಟು 4 ಸಾವಿರ ಜನರು ಕೆಲಸ ಮಾಡುತ್ತಿದ್ದು, ಎಲ್ಲರೂ ಒಂದೇ ಬಾರಿ ದಾಖಲೆಗಳನ್ನು ಸಲ್ಲಿಸುವುದು ಹೇಗೆ ಸಾಧ್ಯ.? 15 ದಿನದೊಳಗೆ ಪತ್ರ ಸಲ್ಲಿಸದಿದ್ದರೆ ಕೆಲಸದಿಂದ ತೆಗೆದುಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ನಗರ ವೃತ್ತ ಸಿಪಿಐ ಕೃಷ್ಣರಾಜು ಸ್ಥಳಕ್ಕೆ ಭೇಟಿ ನೀಡಿ, ಚಾಲಕರಿಗೆ ಪ್ರಮಾಣ ಪತ್ರ ನೀಡುವ ಕುರಿತು ಪೊಲೀಸ್‌ ವರಿಷ್ಠಾಧಿಕಾರಿ ಜತೆ ಮಾತನಾಡಿದ್ದು, ಕಚೇರಿಯ ಡಿಎಸ್‍ಬಿ ಯೂನಿಟ್ ಸಂಪರ್ಕಿಸಿ ಅರ್ಜಿ ಸಲ್ಲಿಸಿದರೆ ವಿಳಂಬವಿಲ್ಲದೆ ಪತ್ರ ದೊರೆಯಲಿದೆ. ಪ್ರತಿಭಟನೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು. ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಟ್ಯಾಂಕರ್ ಚಾಲಕರಾದ ದೇವರಾಜು, ನಾಗರಾಜು, ವೆಂಕಟೇಶ್, ಮುರುಳಿ ಹಾಗೂ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.