ಹಾಸನ: ‘ರಾಗಿ ಖರೀದಿ ಕೇಂದ್ರದಲ್ಲಿ ರೈತರು ಬೆಳೆದ ರಾಗಿ ಖರೀದಿ ಮಾಡದೇದಲ್ಲಾಳಿಗಳಿಂದ ಪುಡಿಗಾಸು ಪಡೆದು ಅವರಿಂದ ರಾಗಿ ಖರೀದಿ ಮಾಡಲಾಗಿದೆ’ ಎಂದು ಆರೋಪಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ಹೆಸರುನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಿರುವುದಕ್ಕೆ ಆಕ್ರೋಶಗೊಂಡ ರೈತರು,ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ಬಂದು ಪ್ರತಿಭಟನೆ ನಡೆಸಿ, ಅಳಲು ತೋಡಿಕೊಂಡರು.
‘ಸರ್ಕಾರದಿಂದ ನಿಗದಿ ಮಾಡಿರುವ ರಾಗಿ ಖರೀದಿ ಕೇಂದ್ರಕ್ಕೆ ಏ.25ಕ್ಕೆಬಂದಿದ್ದೆವು.ಅಂದು ಸರ್ವರ್ ಸಮಸ್ಯೆ ಕಾರಣಕ್ಕೆ ಏ.28ಕ್ಕೆ ಬರುವಂತೆ ಹೇಳಿ,ಟೋಕನ್ ಸಂಖ್ಯೆ ನೀಡಿ ಕಳುಹಿಸಿದ್ದರು. ಆದರೆ, ಇಂದು ಖರೀದಿ ಕೇಂದ್ರಕ್ಕೆ ಹೋದರೆ, ಈಗಾಗಲೇ ರಾಗಿ ಖರೀದಿ ಮಾಡುವ ಪ್ರಕ್ರಿಯೆ ಮುಗಿದಿದೆ ಎಂಬಸಬೂಬು ಹೇಳುತ್ತಿದ್ದಾರೆ’ ಎಂದು ರೈತರು ದೂರಿದರು.
‘ರಾಗಿ ಖರೀದಿ ಕೇಂದ್ರದಲ್ಲೂ ದಂಧೆ ನಡೆಯುತ್ತಿದೆ.ಖರೀದಿ ಕೇಂದ್ರದಲ್ಲಿರುವ ಅಧಿಕಾರಿಗಳು ಪಹಣಿಗೆ ಒಂದು ಐಎಫ್ಡಿ ಸೃಷ್ಟಿಸಿ ಮಧ್ಯವರ್ತಿಗಳು ಸಂತೆ ಇತರೆ ಕಡೆಗಳಲ್ಲಿ ಕಡಿಮೆ ಬೆಲೆಗೆ ರಾಗಿಖರೀದಿಸಿ ಶೇಖರಿಸಿದ್ದನ್ನು ಬೆಂಬಲ ಬೆಲೆಯಡಿ ತೆರೆದಿದ್ದ ಖರೀದಿ ಕೇಂದ್ರದಲ್ಲಿಮಾರಾಟ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಕಾರರ ಅಹವಾಲು ಆಲಿಸಲು ಬಂದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ, ಖರೀದಿ ಕೇಂದ್ರದ ವ್ಯವಸ್ಥಾಪಕ ರಂಗನಾಥ್ ಅವರೊಂದಿಗೆರೈತರು ವಾಗ್ವಾದ ನಡೆಸಿದರು. ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳದೆ
ಇದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ಗಿರೀಶ್, ‘ಸರ್ಕಾರ1.14 ಲಕ್ಷ ಟನ್ ರಾಗಿ ಖರೀದಿಗೆ ಅನುಮತಿ ನೀಡಿದೆ. ಅದು ಪೂರ್ಣಗೊಂಡ ಬಳಿಕ ಆನ್ಲೈನ್ನಲ್ಲಿ ನೋಂದಣಿ ಸ್ಥಗಿತಗೊಳ್ಳಲಿದೆ. ಈಗಾಗಲೇ ಜಿಲ್ಲೆಯಲ್ಲಿ 10,800 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ರೈತರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.
ರೈತರಾದ ದ್ಯಾವೇಗೌಡ, ಹನುಮಂತೇಗೌಡ, ಕಾಂಗ್ರೆಸ್ ಮುಖಂಡ ಬನವಾಸೆರಂಗಸ್ವಾಮಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.