ADVERTISEMENT

ಮಳೆ: ಚನ್ನರಾಯಪಟ್ಟಣ ತಾಲ್ಲೂಕು ₹ 10 ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 3:30 IST
Last Updated 25 ಅಕ್ಟೋಬರ್ 2021, 3:30 IST
ನುಗ್ಗೇಹಳ್ಳಿ ಹೋಬಳಿಯ ಹೂವಿನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ರಂಗಸ್ವಾಮಿ ಅವರ ಮನೆ ಕುಸಿದಿದ್ದು ಸ್ಥಳಕ್ಕೆ ಶಾಸಕ ಸಿ.ಎನ್ ಬಾಲಕೃಷ್ಣ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು
ನುಗ್ಗೇಹಳ್ಳಿ ಹೋಬಳಿಯ ಹೂವಿನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ರಂಗಸ್ವಾಮಿ ಅವರ ಮನೆ ಕುಸಿದಿದ್ದು ಸ್ಥಳಕ್ಕೆ ಶಾಸಕ ಸಿ.ಎನ್ ಬಾಲಕೃಷ್ಣ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು   

ನುಗ್ಗೇಹಳ್ಳಿ: ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಕಳೆದ 1 ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಸುಮಾರು 50ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ನಿರಾಶ್ರಿತರಿಗೆ ಪರಿಹಾರ ನೀಡಲು ಸರ್ಕಾರ ಹೆಚ್ಚು ಅನುದಾನ ನೀಡುವಂತೆ ಶಾಸಕ ಸಿ.ಎನ್ ಬಾಲಕೃಷ್ಣ ಒತ್ತಾಯಿಸಿದರು.

ಮಳೆಗೆ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದಅವರು, ‘ಬಹಳ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಇದರಿಂದ ಅಂದಾಜು ₹ 3 ಕೋಟಿ ನಷ್ಟವಾಗಿದೆ. ಶಾಲಾ ಕಟ್ಟಡ ಸೇರಿದಂತೆ ಮನೆಗಳು ಕೆಲ ಸೇತುವೆಗಳು ಕುಸಿದು ಬಿದ್ದಿವೆ. ತಾಲ್ಲೂಕಿನಲ್ಲಿ ಸುಮಾರು ₹ 10 ಕೋಟಿ ನಷ್ಟವಾಗಿದ್ದು. ಮನೆ ಕಳೆದುಕೊಂಡ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ₹ 12 ರಿಂದ ₹ 15 ಸಾವಿರದವರೆಗೆ ಪರಿಹಾರ ಕೊಡಲು ತಹಶೀಲ್ದಾರ್ ಅವರಿಗೆ ತಿಳಿಸಿದ್ದು. ಅವರು ಈ ಸಂಬಂಧ ಆಯಾ ಹೋಬಳಿಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪರಿಹಾರ ನೀಡುತ್ತಾರೆ’ ಎಂದು ಹೇಳಿದರು.

ಶನಿವಾರ ರಾತ್ರಿ ಸುಮಾರು 16 ಸೆಂ.ಮೀಯಷ್ಟು ಮಳೆಯಾಗಿದ್ದು. ಇನ್ನೂ 5 ದಿನ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು.

ADVERTISEMENT

ಮಳೆಯಿಂದ ಹೋಬಳಿಯ ದ್ಯಾವಲಾಪುರದಲ್ಲಿ 3 ಮನೆ, ನರೇನಹಳ್ಳಿ 2, ಹೂವಿನಹಳ್ಳಿ 2, ರಾಂಪುರ 1, ಎ.ಬೆಳಗುಲಿ 1, ನವಿಲೆ ತಿಮ್ಲಾಪುರದಲ್ಲಿ 1 ಮನೆ ಕುಸಿದಿದೆ. ತಾಲ್ಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಸಮಗ್ರ ವರದಿ ನೀಡುವಂತೆ ಈಗಾಗಲೇ ತಿಳಿಸಿದ್ದು ಈ ಸಂಬಂಧ ನಾಳೆ ತಾಲ್ಲೂಕು ಕೇಂದ್ರದಲ್ಲಿ ಸಭೆ ಕರೆಯಲಾಗಿದೆ ಎಂದರು.

ಹುಲಿಕೆರೆ ಗೇಟ್‌ನಲ್ಲಿರುವ ಚನ್ನನ್ನಕಟ್ಟೆಕೆರೆ ಹಾಗೂ ಮಳೆಯಿಂದ ಹಾನಿಯಾಗಿದ್ದ ರಸ್ತೆ ಹಾಗೂ ದೊಡ್ಡಚರಂಡಿ ಮತ್ತು ಚಿಕ್ಕೋನಹಳ್ಳಿ ಗ್ರಾಮದ ಉದ್ದಣನಕಟ್ಟೆ ಹತ್ತಿರ ನವಿಲೆ ಏತನೀರಾವರಿ ಯೋಜನೆಯ ಬಲದಂಡೆ ನಾಲೆಗೆ ಒಡೆದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸಂದರ್ಭದಲ್ಲಿ ತಹಶೀಲ್ದಾರ್ ಜೆ.ಬಿ.ಮಾರುತಿ, ಹೇಮಾವತಿ ಸಹಾಯಕ ಎಂಜಿನಿಯರ್‌ಗಳಾದ ಪುನೀತ್, ವಿಜಯ್‌ಕುಮಾರ್, ಸಂತೇಶಿವರ ಗ್ರಾ.ಪಂ ಅಧ್ಯಕ್ಷ ಪ್ರಕಾಶ್, ಗ್ರಾ.ಪಂ ಸದಸ್ಯರಾದ ಧರ್ಮರಾಜ್, ಜೆಡಿಎಸ್ ಮುಖಂಡರಾದ ತೋಟಿ ನಾಗರಾಜು, ಬಿ.ಆರ್.ದೊರೆಸ್ವಾಮಿ, ನಾಗೇಶ್, ಜಯಲಿಂಗೇಗೌಡ, ಸಂಪತ್ ಕುಮಾರ್, ಚಿಕ್ಕೋನಹಳ್ಳಿ ವಿಜಯ್ ಕುಮಾರ್, ಮಾಜಿ ಪ್ರಧಾನ ವೀರೇಶ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.