ಕೊಣನೂರು (ಹಾಸನ ಜಿಲ್ಲೆ): ರಾಮನಾಥಪುರ ಪಟ್ಟಣದ ಪುರಾಣ ಪ್ರಸಿದ್ಧ ಸುಬ್ರಹ್ಮಣ್ಯಸ್ವಾಮಿ ಮಹಾರಥೋತ್ಸವ ಸೋಮವಾರ (ಡಿ.2) ಜರುಗಲಿದೆ.
ರಥೋತ್ಸವಕ್ಕಾಗಿ ದೇವಾಲಯ ವಿದ್ಯುತ್ ದೀಪಗಳಿಂದ ಅಲಂಕೃತವಾಗಿದೆ. ಒಂದು ತಿಂಗಳ ಕಾಲ ಜರುಗುವ ಜಾತ್ರೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತರು ಹರಕೆ ತೀರಿಸಲಿದ್ದು, ಆಶ್ಲೇಷ ಬಲಿ, ಸರ್ಪ ಪೂಜೆ, ಹೋಮ, ನಾಗ ಪ್ರತಿಷ್ಠಾಪನೆಯಂಥ ಪೂಜಾ ಕೈಂಕರ್ಯಗಳು ನಡೆಯಲಿವೆ.
ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣದ ಎಲ್ಲಾ ರಸ್ತೆಗಳು, ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ರಾಮೇಶ್ವರ ಮತ್ತು ಸುಬ್ರಹ್ಮಣ್ಯೇಶ್ವರ ದೇವಾಲಯದ ಬಳಿ ₹50 ಲಕ್ಷ ವೆಚ್ಚದ 2 ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸ್ನಾನಘಟ್ಟದಲ್ಲಿ ಮಹಿಳೆಯರಿಗಾಗಿ ತಾತ್ಕಾಲಿಕ ಶೆಡ್ಗಳ ನಿರ್ಮಾಣ ಮಾಡಲಾಗಿದೆ.
ಕಾವೇರಿ ನದಿಯಲ್ಲಿ ಹೆಚ್ಚಿನ ಪ್ರಮಾಣದ ಹರಿವು ಇರುವುದರಿಂದ ಗೋಗರ್ಭ ಶಿಲೆಯ ಬಳಿ ಹೋಗಬಾರದು ಎಂದು ಸೂಚನಾ ಫಲಕ ಅಳವಡಿಸಲಾಗಿದೆ.
ರಾತ್ರಿ ವೇಳೆಯಲ್ಲಿ ಸ್ನಾನಘಟ್ಟದಲ್ಲಿ ತೊಂದರೆ ಆಗದಂತೆ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ವಾಹನ ಪಾರ್ಕಿಂಗ್ಗಾಗಿ ಸ್ಥಳ ನಿಗದಿ ಮಾಡಲಾಗಿದೆ. ಪಟ್ಟಣದ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
‘ಸ್ನಾನಘಟ್ಟದಲ್ಲಿ ಹೆಚ್ಚಿನ ನೀರಿನ ಹರಿವು ಇರುವುದರಿಂದ ಭಕ್ತರು ಎಚ್ಚರಿಕೆ ವಹಿಸಬೇಕು’ ಎಂದು ಪಿಡಿಒ ವಿಜಯಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.