ಬಾಣಾವರ: ಕಳೆದ ವಾರ ಬಿದ್ದ ಮಳೆಗೆ ಸಾವಿರಾರು ವರ್ಷ ಹಳೆಯದಾದ ಕೋಟೆಯ ಗೋಡೆಯೊಂದರ ಭಾಗ ಕುಸಿತು ಬಿದ್ದಿದೆ.
ಪಟ್ಟಣದ ಕೋಟೆ ಬಡಾವಣೆಯ ದೇವಾಲಯ ರಸ್ತೆಯಲ್ಲಿರುವ ಈ ಕೋಟೆಯನ್ನು ಪಾಳೆಗಾರರು ತಮ್ಮ ರಾಜ್ಯ ರಕ್ಷಣೆಗಾಗಿ ನಿರ್ಮಿಸಿಕೊಂಡಿದ್ದರಂತೆ. ನಂತರ ಕ್ರಿ.ಶ. 10ರಿಂದ 14ನೇ ಶತಮಾನದವರೆಗೆ ಆಳಿದ ಹೊಯ್ಸಳರ ಕಾಲದಲ್ಲಿ ಸೈನಿಕರ ತಂಗುದಾಣವಾಗಿ, ಆಯುಧಗಾರವಾಗಿ ಯುದ್ಧ ಚಟುವಟಿಕೆಗಳಿಗೆ ಬಾಣಾವೂರು ಎಂಬ ಹೆಸರಿನ ಕೇಂದ್ರವಾಗಿತ್ತು. ಬೃಹದಾಕಾರದ ಕೋಟೆಯನ್ನೇ ಉಗ್ರಾಣವಾಗಿಸಿಕೊಂಡು ಆಯುಧಗಾರವನ್ನಾಗಿ ಮಾಡಿಕೊಂಡಿದ್ದರು ಎಂದು ಇತಿಹಾಸದಿಂದ ತಿಳಿಯುತ್ತದೆ.
ಹೊಯ್ಸಳರ ತರುವಾಯ ವಿಜಯನಗರ ಇಕ್ಕೇರಿ ಅರಸರು, ನಂತರ ಮೈಸೂರು ಅರಸು ಚಿಕ್ಕದೇವರಾಜ ಅರಸರ (1690) ಆಳ್ವಿಕೆಗೆ ಒಳಪಟ್ಟಂತಹ ಬಾಣಾವರದಲ್ಲಿ ಕೋಟೆ ಕಾಲ ಕ್ರಮೇಣ ಶಿಥಿಲಗೊಂಡಿತ್ತು. ಊರಿನ ನಡುವೆ ಇದ್ದ ಕೋಟೆ– ಉಗ್ರಾಣ ಈಚೆಗೆ ಬಿದ್ದ ಭಾರಿ ಮಳೆಗೆ ಒಂದು ಭಾಗ ಕುಸಿದು ಬಿದ್ದಿದ್ದು ಗ್ರಾಮದ ಐತಿಹಾಸಿಕ ಸ್ಮಾರಕಕ್ಕೆ ಧಕ್ಕೆಯಾಗಿದೆ.
ಐತಿಹಾಸಿಕ ಪರಂಪರೆಯ ಕುರುಹಾದ ಇದನ್ನು ಸಂಬಂಧಪಟ್ಟ ಇಲಾಖೆಯವರು ದುರಸ್ತಿ ಮಾಡಿ ರಕ್ಷಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.