ಕೊಣನೂರು: ಸಹಸ್ರಾರು ಭಕ್ತರ ಇಷ್ಟ ದೇವತೆ, ಶಕ್ತಿ ದೇವತೆ ಅರಸೀಕಟ್ಟೆ ಅಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಪೂಜಾ ವಿಶೇಷಗಳ ಜೊತೆಗೆ 2 ದಿನಗಳ ಕಾಲ ದೇವಾಲಯ ಸಮಿತಿ ವತಿಯಿಂದ ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
ಮೂರನೇ ವರ್ಷದ ಅರಸೀಕಟ್ಟೆ ಅಮ್ಮನವರ ಜಾತ್ರಾ ಮಹೋತ್ಸವ ಮತ್ತು ರಥೋತ್ಸವದ ಅಂಗವಾಗಿ ದೇವಾಲಯ ಸಮಿತಿಯು ದೇವಾಲಯದ ಆವರಣದಲ್ಲಿ ಜ.17 ರಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಗ್ರಾಮೀಣ ಕ್ರೀಡಾ ಸ್ಫರ್ಧೆಗಳು, ಮ್ಯಾರಥಾನ್ ಓಟ, ಎಚ್.ಪಿ.ವಿ. ಚುಚ್ಚುಮದ್ದು ನೀಡುವುದು ಮತ್ತು ಜಾನಪದ ಸಾಂಸ್ಕ್ರತಿಕ ಕಾರ್ಯಕ್ರಮಗಳ ಮೂಲಕ ಕ್ರೀಡಾ, ಧಾರ್ಮಿಕ ಸಂಭ್ರಮ ಮನೆ ಮಾಡಲಿದೆ.
ಜ.17 ರಂದು ಬೆಳಿಗ್ಗೆ 8 ಗಂಟೆಗೆ ದೇವಾಲಯದ ಆವರಣದಲ್ಲಿ ಗ್ರಾಮೀಣ ಸ್ಪರ್ಧೆಗಳು ಪ್ರಾರಂಭವಾಗಲಿದ್ದು, ಪುರುಷರಿಗಾಗಿ ಗೋಣಿಚೀಲದ ಓಟ, ಮೂರುಕಾಲು ಓಟ, ಒಂಟಿಕಾಲು ಓಟ, ಕಾಯಿ ಒಡೆಯುವ ಸ್ಫರ್ಧೆ, ಕೋಲಾಟ ಸ್ಪರ್ಧೆಗಳು, ಮಹಿಳೆಯರಿಗೆ ರಂಗೋಲಿ ಸ್ಫರ್ಧೆ. ನೀರು ತುಂಬಿದ 2 ಬಿಂದಿಗೆಗಳನ್ನು ಹೊತ್ತು ಓಡುವುದು, ಚಮಚದಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಓಡುವುದು, ಕೊಂಟೋ ಬಿಲ್ಲೆ ಮತ್ತು ಪುರುಷರು ಮತ್ತು ಮಹಿಳೆಯರಿಗಾಗಿ ಹಗ್ಗಜಗ್ಗಾಟ, ಕಣ್ಣು ಕಟ್ಟಿಕೊಂಡು ಮಡಿಕೆ ಒಡೆಯುವುದು, 16 ವರ್ಷದ ಮಕ್ಕಳಿಗೆ ಸ್ಲೋ ಸೈಕಲ್ ರೇಸ್, ಸಂಗೀತ ಕುಚಿ ಸ್ಫರ್ಧೆಗಳನ್ನು ಏರ್ಪಡಿಸಲಾಗಿದೆ.
ಏಕವ್ಯಕ್ತಿ ಸ್ಫರ್ಧೆಗಳಿಗೆ ಪ್ರಥಮ ₹1 ಸಾವಿರ, ದ್ವಿತೀಯ ₹750 ಮತ್ತು ತೃತೀಯ ಬಹುಮಾನವಾಗಿ ₹500 ನೀಡಲಾಗುವುದು. ಗುಂಪು ಸ್ಫರ್ಧೆಗಳಾದ ಕೋಲಾಟ ಮತ್ತು ಹಗ್ಗಜಗ್ಗಾಟಗಳಿಗೆ ಪ್ರಥಮ ₹3 ಸಾವಿರ, ದ್ವಿತೀಯ ₹2 ಸಾವಿರ ಮತ್ತು ತೃತೀಯ ₹1 ಸಾವಿರ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಲಾಗುವುದು.
ಮ್ಯಾರಥಾನ್ ರೇಸ್: ಜ.17 ರಂದು ಬೆಳಿಗ್ಗೆ 7.30ಕ್ಕೆ ರಾಮನಾಥಪುರದ ಬಸವೇಶ್ವರ ಸರ್ಕಲ್ನಿಂದ ಪ್ರಾರಂಭಿಸಿ ಕೊಣನೂರು, ಕೆರೆಕೋಡಿ ಮಾರ್ಗವಾಗಿ ಅರಸೀಕಟ್ಟೆಯವರೆಗೆ ಮ್ಯಾರಥಾನ್ ರೇಸ್ ಸ್ಫಧೆಯಿದ್ದು, ವಿಜೇತರಿಗೆ ಪ್ರಥಮ ₹5 ಸಾವಿರ, ದ್ವಿತೀಯ ₹4 ಸಾವಿರ ಮತ್ತು ತೃತೀಯ ₹3 ಸಾವಿರ ನಗದು ಬಹುಮಾನವಿರುತ್ತದೆ.
ಗ್ರಾಮೀಣ ಭಾಗದ ಜನರಿಗೆ ವಿಶೇಷ ಆಟೋಟಗಳ ಸ್ಪರ್ಧೆ ವಿಜೇತರಿಗೆ ಬಹುಮಾನ, ಪ್ರಶಂಸನಾ ಪತ್ರ ವಿತರಣೆ ಸಾಂಸ್ಕೃತಿಕ, ಧಾರ್ಮಿಕ, ಕ್ರೀಡಾ ಚಟುವಟಿಕೆಗಳ ಸಮ್ಮಿಳನ
ರಥೋತ್ಸವ ನಿಮಿತ್ತ ವಿವಿಧ ದೇಸಿ ಕ್ರೀಡೆಗಳು ಮ್ಯಾರಥಾನ್ ಓಟ ಎಚ್ಪಿವಿ ಚುಚ್ಚುಮದ್ದು ನೀಡುವುದು ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಿದ್ದು ಸಾರ್ವಜನಿಕರು ಪ್ರಯೋಜನ ಪಡೆಯಬೇಕು.
-ಎ.ಟಿ. ರಾಮಸ್ವಾಮಿ ಅರಸಿಕಟ್ಟೆಯಮ್ಮ ದೇವಾಲಯ ಸಮಿತಿ ಅಧ್ಯಕ್ಷ
ಎಚ್.ಪಿ.ವಿ. ಚುಚ್ಚುಮದ್ದು ಜ.18 ರಂದು ಬೆಳಿಗ್ಗೆ 8 ಗಂಟೆಯಿಂದ ಅರಸೀಕಟ್ಟೆ ಅಮ್ಮ ದೇವಾಲಯದ ಆವರಣದಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಹಾಸನ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಕಾರದೊಂದಿಗೆ ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು 9 ರಿಂದ 14 ವರ್ಷದ ವಯೋಮಿತಿಯ ಹೆಣ್ಣು ಮಕ್ಕಳಿಗೆ ಎಚ್.ಪಿ.ವಿ. ಚುಚ್ಚುಮದ್ದನ್ನು ಉಚಿತವಾಗಿ ನೀಡುವ ಕಾರ್ಯಕ್ರಮವಿದೆ. ಇದೆಲ್ಲದರ ನಡುವೆ ಜಾನಪದ ಕಲಾ ಪರಿಷತ್ ಸದಸ್ಯ ದೇವಾನಂದ ವರಪ್ರಸಾದ ಮತ್ತು ತಂಡದವರಿಂದ ಜಾನಪದ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ಸವಿಯಬಹುದಾಗಿದೆ. ಬಲಿ ನಿಷೇಧ ಅರಸೀಕಟ್ಟೆ ಅಮ್ಮ ದೇವಿಗೆ ರಥೋತ್ಸವ ಮತ್ತು ಜಾತ್ರಾಮಹೋತ್ಸವದ ಅಂಗವಾಗಿ ದೇವಾಲಯ ಮತ್ತು ಆವರಣದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುವ ಹಿನ್ನೆಲೆಯಲ್ಲಿ ಜ. 16ರಿಂದ 18 ರಂದು ಮೂರು ದಿನಗಳ ಕಾಲ ಅರಸೀಕಟ್ಟೆ ಅಮ್ಮ ದೇವಿ ಕ್ಷೇತ್ರದಲ್ಲಿ ಬಲಿ ಕೊಡುವುದನ್ನು ನಿಷೇಧಿಸಲಾಗಿದೆ. ಜ.17 ರಂದು ಮಧ್ಯಾಹ್ನ 12.35 ರಿಂದ 1.46 ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಅರಸೀಕಟ್ಟೆ ಅಮ್ಮನವರ ರಥೋತ್ಸವ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.