ಹಾಸನ: 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಎನ್.ಎಲ್. ಚನ್ನೇಗೌಡರಿಗೆ ಆಹ್ವಾನ ನೀಡಲಾಯಿತು.
ಪರಿಷತ್ನ ಪದಾಧಿಕಾರಿಗಳು ಅಧ್ಯಕ್ಷರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಹಾಗೂ ಗಂಧದ ಹಾರ ಹಾಕುವ ಮೂಲಕ ಸಮ್ಮೇಳನದ ಆಹ್ವಾನ ಪತ್ರಿಕೆ ನೀಡಿ ಆಮಂತ್ರಿಸಿದರು. ನಂತರ ಮಾತನಾಡಿದ ಚನ್ನೇಗೌಡ, ಫೆ. 26 ರಿಂದ 28ರ ವರೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
‘ನನ್ನ ಸಾಹಿತ್ಯ ಕೃಷಿಗೆ ಸಂದ ಗೌರವ ಇದು. 31 ಕೃತಿಗಳು, ಅನೇಕ ಕವನಗಳನ್ನು ರಚಿಸಿದ್ದೇನೆ. ಆದರೆ ಯಾವುದನ್ನು ನಿರೀಕ್ಷೆ ಮಾಡಿರಲಿಲ್ಲ. ಸಾಹಿತ್ಯ ಕೃಷಿಯಿಂದ ಹಣ ಗಳಿಸಲಿಲ್ಲ. ಒಬ್ಬ ಸಾಹಿತಿ ಬರೆದ ಪುಸ್ತಕ ಪ್ರಕಟಿಸಲು ಸಾವಿರಾರು ರೂಪಾಯಿ ಹಣ ನೀಡಬೇಕು. ಲಾಭದ ನಿರೀಕ್ಷೆ ಇಟ್ಟುಕೊಳ್ಳದೇ ಪುಸ್ತಕ ಬರೆಯಲು ಪ್ರಾರಂಭಿಸಿದೆ’ ಎಂದು ಹೇಳಿದರು.
ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಮಾತನಾಡಿ, ‘ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸೇವೆ ಗುರುತಿಸಿ ಗೌಡರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ’ ಎಂದು ಸಮರ್ಥಿಸಿಕೊಂಡರು.
ಸಾಹಿತಿ ಚಂದ್ರಕಾಂತ್ ಪಡೆಸೂರು, ಗೌರವಾಧ್ಯಕ್ಷ ಜಾವಗಲ್ ಪ್ರಸನ್ನಕುಮಾರ್, ಕಲ್ಲಹಳ್ಳಿ ಹರೀಶ್, ಕೋಶಾಧ್ಯಕ್ಷ ಹರಳಹಳ್ಳಿ ರಂಗಸ್ವಾಮಿ, ಆಲೂರು ತಾಲ್ಲೂಕು ಘಟಕದ ಅಧ್ಯಕ್ಷ ಗಂಗರ ಶ್ರೀಕಾಂತ್, ಕತ್ತಿಮಲ್ಲೇನಹಳ್ಳಿ ಪರಮೇಶ್, ಸೋಮನಾಯಕ್, ಕನ್ನಡ ಉಪಾನ್ಯಾಸಕ ಸೀ.ಚ. ಯತೀಶ್ವರ್, ಬೆಳಗುಲಿ ಪರಮೇಶ್, ಮನೆ ಮನೆ ಕವಿಗೋಷ್ಠಿಯ ಶಾಂತ ಅತ್ನಿ, ಜವರೇಗೌಡ, ವನಜಾ ಸುರೇಶ್, ಭಾರತ ಸೇವಾದಳ ಜಿಲ್ಲಾ ಸಂಘಟಕಿ ವಿ.ಎಸ್. ರಾಣಿ, ಆನಂದ್ ಪಾಟೀಲ್, ಕಲಾವಿದ ಶಂಕರಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.