ADVERTISEMENT

ರೋಗಿಗಳಿಂದ ಹೆಚ್ಚು ಶುಲ್ಕ ಪಡೆದಿರುವುದು ಸಾಬೀತು: ಡಿ.ಸಿ ಗಿರೀಶ್‌

​ಪ್ರಜಾವಾಣಿ ವಾರ್ತೆ
Published 14 ಮೇ 2021, 14:08 IST
Last Updated 14 ಮೇ 2021, 14:08 IST
ಗಿರೀಶ್‌
ಗಿರೀಶ್‌   

ಹಾಸನ: ಸಿ.ಟಿ ಸ್ಕ್ಯಾನ್‌ಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ
ಜಿಲ್ಲೆಯ ನಾಲ್ಕು ಖಾಸಗಿ ಸಂಸ್ಥೆಗಳಿಗೆ ತಲಾ ₹10 ಸಾವಿರ ದಂಡ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ
ಆರ್.ಗಿರೀಶ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಾಸನ ನಗರದ ಯುನಿಟಿ ಸ್ಕ್ಯಾನ್‌ ಸೆಂಟರ್‌,
ಜನಪ್ರಿಯ ಆಸ್ಪತ್ರೆಯ ಸಿ.ಟಿ ಸ್ಕ್ಯಾನ್‌, ಎಸ್‌ಎಸ್‌ಎಂ ಆಸ್ಪತ್ರೆಯ ಸಿ.ಟಿ ಸ್ಕ್ಯಾನ್‌, ಚನ್ನರಾಯಪಟ್ಟಣ ನಗರದ ಹೈಟೆಕ್‌
ಸ್ಕ್ಯಾನಿಂಗ್ ಸೆಂಟರ್‌ಗೆ ನೋಟಿಸ್ ಜಾರಿ ಮಾಡಿ, 24 ತಾಸಿನೊಳಗೆ ಖುದ್ದು ಹಾಜರಾಗಿ ಉತ್ತರ ನೀಡಲು
ಸೂಚಿಸಲಾಗಿತ್ತು. ಆದರೆ ಯಾರು ಲಿಖತ ಉತ್ತರ ನೀಡಲಿಲ್ಲ. ಹಾಗಾಗಿ ಹಾಸನ ತಹಶೀಲ್ದಾರ್‌ ಮತ್ತು
ಚನ್ನರಾಯಪಟ್ಟಣ ತಾಲ್ಲೂಕು ಆರೋಗ್ಯಾಧಿಕಾರಿ ನೀಡಿದ ವರಿದ ಸತ್ಯವಾಗಿರುವುದು ಮೇಲ್ನೋಟಕ್ಕೆ ಕಂಡು
ಬಂದಿದೆ.

ಕರ್ನಾಟಕ ಸಾಂಕ್ರಮಿಕ ರೋಗಗಳ ಕಾಯ್ದೆ 2020 ಹಾಗೂ ಕರ್ನಾಟಕ ಪ್ರೈವೇಟ್‌ ಮೆಡಿಕಲ್‌
ಎಸ್ಟಾಬ್ಲಿಷ್‌ಮೆಂಟ್‌ ಕಾಯ್ದೆ 2007 ರ ಪ್ರಕಾರ ನಾಲ್ಕು ಸಂಸ್ಥೆಗಳಿಗೆ ತಲಾ ಹತ್ತು ಸಾವಿರ ರೂಪಾಯಿ ದಂಡ
ವಿಧಿಸಿವುದರ ಜತೆಗೆ ಹೆಚ್ಚುವರಿ ಪಡೆದ ಹಣದ ಒಂದೂವರೆ ಪಟ್ಟು ಹಣವನ್ನು ವಸೂಲಿ ಮಾಡಲಾಗಿದೆ ಎಂದು
ಹೇಳಿದರು.

ADVERTISEMENT

ಹೆಚ್ಚುವರಿ ಪಡೆದ ಹಣವನ್ನು ರೋಗಿಗೆ ಹಿಂದಿರುಗಿಸಬೇಕು ಹಾಗೂ ಉಳಿದ ಮೊತ್ತವನ್ನು ಆರೋಗ್ಯ ರಕ್ಷಣ ಸಮಿತಿಗೆ
ಪಾವತಿಸಲು ಆದೇಶಿಸಲಾಗಿದೆ. ಮತ್ತೊಮ್ಮೆ ಈ ರೀತಿ ಪ್ರಕರಣ ಮರುಕಳಿಸಿದರೆ ಸಂಬಂಧಪಟ್ಟ ಸ್ಕ್ಯಾನಿಂಗ್‌
ಸೆಂಟರ್ ಮುಚ್ಚಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.

ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಅಧಿಕಾರಿಗಳ
ತಂಡವನ್ನು ನಿಯೋಜಿಸಿ ಬಿಲ್ ಆಡಿಟ್ ನಡೆಸಿ, ಎರಡು ದಿನದಲ್ಲಿ ಅಂತಹವರ ವಿರುದ್ಧವೂ ಕ್ರಮ ಗೊಳ್ಳಲಾಗುವುದು
ಎಂದು ತಿಳಿಸಿದರು

ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕುವಾರು ಕೋವಿಡ್ ಕೇರ್ ಸೆಂಟರ್ ಗಳನ್ನು
ಪ್ರಾರಂಭಿಸಲಾಗಿದೆ. ಸಾರ್ವಜನಿಕರಲ್ಲಿ ಯಾವುದೇ ರೀತಿಯ ಕೋವಿಡ್ ಲಕ್ಷಣಗಳು ಕಂಡು ಬಂದರೆ ತಪಾಸಣೆ
ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಖಾಸಗಿ ಸಂಘ ಸಂಸ್ಥೆಗಳೂ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ಮುಂದಾದರೆ ಜಿಲ್ಲಾಡಳಿತದಿಂದ ಅಗತ್ಯ
ವೈದ್ಯಕೀಯ ಸೌಲಭ್ಯ ಹಾಗೂ ಔಷಧ ಒದಗಿಸಲಾಗುತ್ತದೆ. ಸರ್ಕಾರರಿಂದ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ
300 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 46 ಆಮ್ಲಜನಕ ಬೆಡ್ ಗಳು ಖಾಲಿ ಇವೆ. ಪ್ರತಿನಿತ್ಯ 10 ರಿಂದ 11ಕೆ.ಎಲ್ ಆಮ್ಲಜನಕ ಹಿಮ್ಸ್ ಗೆ ಸರಬರಾಜಾಗುತ್ತದೆ. ಹೆಚ್ಚುವರಿಯಾಗಿ 3 ಕೆ.ಎಲ್ ಗೆ ಸರ್ಕಾರಕ್ಕೆ ಪ್ರಸ್ತಾವನೆ
ಸಲ್ಲಿಸಲಾಗಿದೆ. ಅದು ಅನುಮೋದನೆ ಹಂತದಲ್ಲಿದೆ ಎಂದು ತಿಳಿಸಿದರು.

ಸೋಂಕಿತರಿಗೆ ಮನೆಯಲ್ಲಿ ಪ್ರತ್ಯೇಕ ಕೊಠಡಿ ಇಲ್ಲದಿದ್ದರೆ ಕೋವಿಡ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯಬಹುದು. ಅಂತವರನ್ನು ಕೋವಿಡ್‌ ಆರೈಕೆ ಕೇಂದ್ರಕ್ಕೆ ಕರೆತರಲು ಆಶಾ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.