
ನುಗ್ಗೇಹಳ್ಳಿ: ಕಾರ್ತಿಕ ಮಾಸದ ಪ್ರಯುಕ್ತ ಹೋಬಳಿಯ ಜಂಬೂರಿನ ಶನೇಶ್ವರ ಸ್ವಾಮಿ 38ನೇ ವರ್ಷದ ಅದ್ದೂರಿ ಜಾತ್ರಾ ಮಹೋತ್ಸವಹಾಗೂ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಶನಿವಾರ ನಡೆಯಿತು.
ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಶನೇಶ್ವರ ಸ್ವಾಮಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಹೋಮ ಹವನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿತು.
ಗ್ರಾಮದ ರಾಜಬೀದಿಗಳಲ್ಲಿ ಶನೇಶ್ವರ ಸ್ವಾಮಿ, ಕೋಟೆ ಮಾರಮ್ಮ ದೇವಿ, ಅವೇರಹಳ್ಳಿ ಚಿಕ್ಕಮ್ಮ ದೇವಿ, ಹಾರೋ ಸೋಮನಹಳ್ಳಿ ಸಂಪಿಗೆ ಮಾರಮ್ಮ ದೇವಿ, ಹುಲಿಕೆರೆ ಆಲದ ಮರದಮ್ಮ ದೇವಿ, ಕಾರೇಕೆರೆಯ ದೇವಮ್ಮ ದೇವಿ, ತಾವರೆ ಕೆರೆಯ ದೊಡ್ಡಮ್ಮ ದೇವಿ, ಮಾತಂಗಿ ದೇವಿ, ವಿರುಪಾಕ್ಷಪುರದ ರೇಣುಕಾ ಯಲ್ಲಮ್ಮ ದೇವಿ, ಒಂಟಿ ಮಾವಿನಹಳ್ಳಿ ಆಂಜನೇಯ ಸ್ವಾಮಿ, ಗೌಡಗೆರೆ ಹುಲಿ ಕೇರಮ್ಮ ದೇವರ ಉತ್ಸವ ನೆರವೇರಿತು. ಮಹಿಳೆಯರ ತಂಬಿಟ್ಟಿನ ಆರತಿ ಸೇವೆ ನಡೆಸಿದರು.
ರಥೋತ್ಸವ ಮುನ್ನ ಶನೇಶ್ವರ ಸ್ವಾಮಿ ರಥ ಸುತ್ತ ಪ್ರದಕ್ಷಿಣೆ ನಡೆಸಿ, ನಂತರ ರಥದಲ್ಲಿ ದೇವರ ಪ್ರತಿಷ್ಠಾಪಿಸಲಾಯಿತು. ಸಂಪ್ರದಾಯದಂತೆ ಪೂಜಾ ವಿಧಿ ವಿಧಾನ ನೆರವೇರಿದ ನಂತರ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ದೇವಾಲಯದ ಧರ್ಮದರ್ಶಿ ಮಹದೇವಸ್ವಾಮಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ರಥಕ್ಕೆ ಹಣ್ಣು ದವನ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು
ರಥೋತ್ಸವದದಲ್ಲಿ ವೀರಭದ್ರ ಕುಣಿತ ಡೊಳ್ಳು ಕುಣಿತ, ನಂದಿದ್ವಜ, ವೀರಗಾಸೆ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು. ಶನೇಶ್ವರ ಸ್ವಾಮಿ ಉಯ್ಯಾಲೆ ಉತ್ಸವ ಹಾಗೂ ರಾಜ ಸತ್ಯವ್ರತ ಅಥವಾ ಶನಿಪ್ರಭಾವ ನಾಟಕ ನಡೆಯಿತು. ಬ್ರಹ್ಮರಥೋತ್ಸವದ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಸುಮಾ ಸಿ.ಎನ್.ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎ.ರಂಗಸ್ವಾಮಿ, ಅರ್ಚಕ ಚೆಲುವರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.