ಹಿರೀಸಾವೆ: ಹೋಬಳಿಯ ಹೊನ್ನಮಾರನಹಳ್ಳಿಯ ಶನೇಶ್ವರ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಮತ್ತು ನಿಂಗಪ್ಪ ಸ್ವಾಮೀಜಿಯ ಪುಣ್ಯಸ್ಮರಣೆ ಪ್ರಯುಕ್ತ ದೇವಸ್ಥಾನದಲ್ಲಿ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆ ಮತ್ತು ಹೋಮ ಜರುಗಿದವು.
ಬೆಳಿಗ್ಗೆ ದೇವರಿಗೆ ಕ್ಷೀರಾಭಿಷೇಕ, ಗಂಗಾಪೂಜೆ, ನಾಗದೇವತಾ ಹಾಗೂ ನವಗ್ರಹ ಪೂಜೆ ಮತ್ತು ವಿವಿಧ ಹೋಮಗಳು ನಡೆದವು. ಶನೇಶ್ವರಸ್ವಾಮಿ ಸೇವಾ ಟ್ರಸ್ಟ್ನ ಅಧ್ಯಕ್ಷ ಕುಮಾರಸ್ವಾಮಿ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಶನಿದೇವರು ಮತ್ತು ನಿಂಗಪ್ಪ ಸ್ವಾಮೀಜಿಯ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತು.
ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ, ತುಮಕೂರು ಜಿಲ್ಲೆಯ ಹೆಬ್ಬೂರು ಸಮೀಪದ ಪಾಲ್ಕೇರಮ್ಮ ದೇವಸ್ಥಾನದ ಧರ್ಮದರ್ಶಿ ನಾಗರಾಜು ಸ್ವಾಮೀಜಿ, ನುಗ್ಗೇಹಳ್ಳಿಯ ಪುರವರ್ಗ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಗೌಡಗೆರೆ ದೊರೆ ಸ್ವಾಮೀಜಿ, ಹೊಸಕೊಪ್ಪಲು ಶಕ್ತಿ ಮಠದ ಬಸವೇಶ್ವರ ಚೈತನ್ಯ ಸ್ವಾಮೀಜಿ, ಕೋಲಾರದ ರಮೇಶ್ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಬೆಂಗಳೂರು ಸುಂಕದಕಟ್ಟೆಯ ಸಂಯೋಗ ನೃತ್ಯ ಶಾಲೆಯ ಕಲಾವಿದರು ಭರತ್ಯನಾಟ್ಯಗಳನ್ನು ಪ್ರದರ್ಶನ ಮಾಡಿದರು.
ಭಕ್ತರ ಸಹಕಾರದಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು, ಹಲವು ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.