ಸಕಲೇಶಪುರ: ಇಲ್ಲಿನ ಹೊಳೆ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಹಾಲಿನ ಅಭಿಷೇಕ, ಹೋಮ, ವಿಶೇಷ ಅಲಂಕಾರ, ಯಕ್ಷಗಾನ, ಅನ್ನಸಂತರ್ಪಣೆ ಸೇರಿದಂತೆ ನಿರಂತರ ಪೂಜೆ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ 1208 ಲೀಟರ್ ಹಾಲಿನ ಅಭಿಷೇಕ ನಡೆದರೆ, ಸಂಜೆ 5ರಿಂದ ಗುರುವಾರ ಬೆಳಿಗ್ಗೆ 4.30ರವರೆಗೆ ನಾಲ್ಕು ಯಾಮದ ಪೂಜೆ ನಡೆಯಿತು. ಪ್ರತಿ ಯಾಮದಲ್ಲಿಯೂ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಉಪವಿಭಾಗಾಧಿಕಾರಿ ಎಂ.ಕೆ.ಶೃತಿ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಾಗೆ ಜೆಎಸ್ಎಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭದ್ರಾವತಿಯ ಲೋಕನಾಥ್ ಬ್ರದರ್ಸ್ ಅವರಿಂದ ಆರ್ಕೆಸ್ಟ್ರಾ, ನೃತ್ಯ ಹಾಗೂ ಮಿಮಿಕ್ರಿ, ಜೂನಿಯರ್ ರಾಜ್ಕುಮಾರ್ ಅವರಿಂದ ಕಾರ್ಯಕ್ರಮ ನಡೆದವು.
ಮೂಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ಕೃಪಾ ಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಬಪ್ಪನಾಡು ಮಹಾತ್ಮೆ ಎಂಬ ಪುಣ್ಯ ಕಥಾ ಭಾಗದ ಯಕ್ಷಗಾನ ಪ್ರದರ್ಶನ ನಡೆಯಿತು.
ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ದುಲ್ರಾಜ್ ಜೈನ್ ಹಾಗೂ ಟ್ರಸ್ಟ್ ಸದಸ್ಯರು ಇದ್ದರು.
3 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನಸಂತರ್ಪಣೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಬಿ.ಎಂ ರಸ್ತೆ ಹಾಗೂ ಸಕಲೇಶ್ವರಸ್ವಾಮಿ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಜನರು ಪರದಾಡುವಂತಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.