
ಶ್ರವಣಬೆಳಗೊಳ: ಪ್ರಕೃತಿಯ ವರದಾನವಾಗಿರುವ ನೈಸರ್ಗಿಕ ಸಂಪತ್ತನ್ನು ಉಳಿಸಿ ಬೆಳೆಸದಿದ್ದರೆ ಮುಂದೊಂದು ದಿನ ತಾಪಮಾನ ಹೆಚ್ಚಾಗಿ ಮಾನವ ಸಹಿತ ಪ್ರಾಣಿ ಸಂಕುಲಗಳು ಬದುಕಿಗಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಸಾವಯವ ಕೃಷಿಕ ಬೆಕ್ಕದ ಬಿ ರಾಘವೇಂದ್ರ ಗುರುವಾರ ಹೇಳಿದರು.
ಹೋಬಳಿಯ ಕಬ್ಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಕೊ ಕ್ಲಬ್ನ ವಿದ್ಯಾರ್ಥಿಗಳು ಬೆಕ್ಕದಲ್ಲಿರುವ ಮಯೂರ ವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು. 20 ಎಕರೆಯ ಸಾವಯವ ಕೃಷಿಯ ತೆಂಗಿನ ತೋಟದಲ್ಲಿ ಸುಮಾರು 5 ಎಕರೆಯ ಪ್ರದೇಶದಲ್ಲಿ ಬೆಳೆದಿರುವ ಅಮೂಲ್ಯ ಸಸ್ಯಗಳಾದ ಆಡುಸೋಗೆ, ಸಿಂಧೂರ ಗಿಡ, ಬಿಳಿಎಕ್ಕದ ಗಿಡ, ರಾಮಫಲ, ಸೀತಾಫಲ, ಅಮೃತ ಬಳ್ಳಿ, ಬೆಟ್ಟದ ನೆಲ್ಲಿ, ಬೇವು, ಲೋಳೆಸರ, ರಕ್ತಚಂದನ, ಅಂಜೂರ, ಒಂದೆಲಗ, ನೋನಿ ಮರ, ರುದ್ರಾಕ್ಷಿ ಗಿಡ, ಕಜಿರಾ, ಅರಳಿ, ಬನ್ನಿ ಗಿಡ, ದರ್ಬೆ ಹುಲ್ಲು, ರಾಮತುಳಸಿ, ನಿಂಬೇಗಿಡ, ನುಗ್ಗೆಗಿಡ, ಪೊರಕೆ ಗಿಡ, ಸೀಬೆಕಾಯಿ, ಪಪ್ಪಾಯ, ಅಗಸಿಕಾಯಿ, ಮಾವಿನಮರ ಮುಂತಾದ ವಿವಿಧ ಮರ ಗಿಡಗಳಿಂದಾಗುವ ಉಪಯೋಗಗಳನ್ನು ಮಕ್ಕಳಿಗೆ ವಿವರಿಸಿದರು.
ಜಮೀನುಗಳಲ್ಲಿ ತೆರೆದ ಬಾವಿ ಕೃಷಿ ಹೊಂಡಗಳನ್ನು ನಿರ್ಮಿಸಿ ಮಳೆಗಾಲದಲ್ಲಿ ಬೀಳುವ ಮಳೆನೀರನ್ನು ಸಂಗ್ರಹಿಸುವುದರಿಂದ ಅಂತರ್ಜಲ ಹೆಚ್ಚಿ ಕೊಳವೆ ಬಾವಿಗಳು ಬತ್ತುವುದಿಲ್ಲ. ಇದರಿಂದ ಕೃಷಿ ಬೆಳೆಗಳಿಗೆ ಜಾನುವಾರು ಮತ್ತು ಕುಡಿಯುವ ನೀರಿಗೂ ಅನುಕೂಲವಾಗುತ್ತದೆ ಎಂದು ವಿವರಿಸಿದರು.
ಇಲ್ಲಿ ಜೇನು ಸಾಕಾಣಿಕೆ, ರಾಶಿವನ, ನಕ್ಷತ್ರವನ, ನವಗ್ರಹ ವನ, ಹಾಗು ತೀರ್ಥಂಕರರ ವನಗಳಿದ್ದು ಅವುಗಳ ಬಗ್ಗೆಯೂ ಮಾಹಿತಿಯನ್ನು ಒದಗಿಸಿದರು. ಮುಖ್ಯ ಶಿಕ್ಷಕಿ ಇಂದಿರಾ ಎ.ಸಿ.ಮಾತನಾಡಿದರು. ರಾಘವೇಂದ್ರ ಅವರನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ಗೌರವಿಸಿದರು.
ವಿದ್ಯಾರ್ಥಿಗಳು ತೆರೆದ ಬಾವಿ ಮತ್ತು ಕೃಷಿ ಹೊಂಡಗಳನ್ನು ವೀಕ್ಷಿಸಿದರು. ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸಾವಯವ ಗೊಬ್ಬರದಿಂದ ಬೆಳೆದ ರಾಮಫಲ, ಅಂಜೂರ, ಅತ್ತಿ ಹಣ್ಣುಗಳನ್ನು ಹಾಗು ತಂಪು ಪಾನೀಯವನ್ನು ಒದಗಿಸಿದರು.
ಶಿಕ್ಷಕ ಲಿಂಗರಾಜು ಮಕ್ಕಳೊಂದಿಗೆ ಪಾಲ್ಗೊಂಡಿದ್ದರು.
ಶ್ರವಣಬೆಳಗೊಳ ಹೋಬಳಿಯ ಕಬ್ಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ನ ವಿದ್ಯಾರ್ಥಿಗಳು ಬೆಕ್ಕದಲ್ಲಿರುವ ಸಾವಯವ ಕೃಷಿಯ ಮಯೂರ ವನಕ್ಕೆ ಭೇಟಿದ ಸಂದರ್ಭದಲ್ಲಿ ಬಿ.ರಾಘವೇಂದ್ರ ರವರು ತೆರೆದ ಬಾವಿ ಮತ್ತು ಕೃಷಿ ಹೊಂಡಗಳ ಬಗ್ಗೆ ಮಾಹಿತಿ ಒದಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.