ADVERTISEMENT

ಕ್ರೀಡಾ ಮನೋಭಾವದವರೇ ಸಾಧಕರು: ತಗಡೂರು

​ಪ್ರಜಾವಾಣಿ ವಾರ್ತೆ
Published 21 ಜನವರಿ 2025, 15:34 IST
Last Updated 21 ಜನವರಿ 2025, 15:34 IST
ಹಾಸನದ ರಾಜೀವ್‌ ಪಾಲಿಟೆಕ್ನಿಕ್‌ ಆವರಣದಲ್ಲಿ ಆಯೋಜಿಸಿದ್ದ ರಾಜೀವ್ ವಾರಿಯರ್ಸ್‌ ಕಪ್‌ ಪಂದ್ಯಾವಳಿಯನ್ನು ಶಿವಾನಂದ ತಗಡೂರು ಉದ್ಘಾಟಿಸಿದರು.
ಹಾಸನದ ರಾಜೀವ್‌ ಪಾಲಿಟೆಕ್ನಿಕ್‌ ಆವರಣದಲ್ಲಿ ಆಯೋಜಿಸಿದ್ದ ರಾಜೀವ್ ವಾರಿಯರ್ಸ್‌ ಕಪ್‌ ಪಂದ್ಯಾವಳಿಯನ್ನು ಶಿವಾನಂದ ತಗಡೂರು ಉದ್ಘಾಟಿಸಿದರು.   

ಹಾಸನ: ಕ್ರೀಡಾ ಮನೋಭಾವ ಇರುವವರು ಸಾಧಕರಾಗಬಲ್ಲರು. ದೇಶಕ್ಕೆ ಸತ್ಪ್ರಜೆಯಾಗಬಲ್ಲರು. ಜೀವನದಲ್ಲಿ ಯಶಸ್ಸು ಗಳಿಸುವರು. ಏಕೆಂದರೆ ಸೋಲು– ಗೆಲುವು ಒಂದು ನಾಣ್ಯದ ಎರಡು ಮುಖವಿದ್ದಂತೆ. ಕ್ರೀಡಾಪಟುಗಳು ಮಾತ್ರ ಅದನ್ನು ಸಮನಾಗಿ ಸ್ವೀಕರಿಸುವರು. ಧರ್ಮ, ಜಾತಿ ಭೇದ ಇಲ್ಲದೇ ಇರುವುದು ಕ್ರೀಡೆಯಲ್ಲಿ ಮಾತ್ರ ಎಂದು ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ನಗರದ ರಾಜೀವ್ ಪಾಲಿಟೆಕ್ನಿಕ್ ಆವರಣದಲ್ಲಿ ರಾಜೀವ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ.ವಿ. ರಾಜೀವ್ ಅವರ ಸ್ಮರಣಾರ್ಥವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಬಾಲಕರ ವಾಲಿಬಾಲ್ ಪಂದ್ಯಾವಳಿ ಮತ್ತು ಸಿಬ್ಬಂದಿ ವರ್ಗದವರಿಗೆ ಡಬಲ್ಸ್ ಷಟಲ್ ಬ್ಯಾಡ್ಮಿಂಟನ್ ಟೂರ್ನಿ ‘ರಾಜೀವ್ ವಾರಿಯರ್ಸ್ ಕಪ್ 2025’ ಕಾರ್ಯಕ್ರಮವನ್ನು ಬಲೂನ್‍ಗಳನ್ನು ಹಾರಿಬಿಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ತಂದೆ– ತಾಯಿಗಳು ಮಕ್ಕಳ ಭವಿಷ್ಯಕ್ಕಾಗಿ ಕಷ್ಟಪಡುತ್ತಾರೆ. ಅವರ ತ್ಯಾಗಗಳಿಗೆ ಮಕ್ಕಳು ಸಾರ್ಥಕತೆ ನೀಡಬೇಕು. ಆ ದೃಷ್ಟಿಯಲ್ಲಿ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಮ್ಮ ವ್ಯಕ್ತಿತ್ವವನ್ನು ದೃಢಶಕ್ತಿ ಮತ್ತು ದೃಢಸಂಕಲ್ಪದಿಂದ ರೂಪಿಸಿಕೊಳ್ಳಬೇಕು ಎಂದರು.

ADVERTISEMENT

ಹಾಸನದ ಆಯುಷ್ ಆಡಳಿತ ವೈದ್ಯಾಧಿಕಾರಿ ಡಾ.ಬಿ.ಕೆ. ರಾಮ ಪ್ರವೀಣ್ ಮಾತನಾಡಿ, ದೇಹಕ್ಕೆ ಸ್ಥಿರತೆ ನೀಡಲು ವ್ಯಾಯಾಮ ಸರ್ವಶ್ರೇಷ್ಠ. ಸತತ ಪ್ರಯತ್ನ, ನಿತ್ಯ ಅಭ್ಯಾಸದಿಂದ ಕ್ರೀಡೆಯಲ್ಲಾಗಲೀ, ವಿದ್ಯೆಯಲ್ಲಾಗಲೀ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಪಾಲಿಟೆಕ್ನಿಕ್ ಬಾಲಕರ ವಾಲಿಬಾಲ್ ಪಂದ್ಯಾವಳಿ ಮತ್ತು ಸಿಬ್ಬಂದಿ ವರ್ಗದವರಿಗೆ ಡಬಲ್ಸ್ ಷಟಲ್ ಬ್ಯಾಡ್ಮಿಂಟನ್ ಟೂರ್ನಿ ಹಾಸನದ ರಾಜೀವ್ ಕಾಲೇಜಿನಲ್ಲಿ ಆಯೋಜಿಸಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಸಮಾರಂಭದಲ್ಲಿ ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಎನ್. ರತ್ನಾ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಡಾ.ರಂಜಿತ್ ರಾಜೀವ್, ರಾಜೀವ್ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ. ಶಂಕರೇಗೌಡ ಎಂ.ಆರ್., ದೈಹಿಕ ಶಿಕ್ಷಣ ನಿರ್ದೇಶಕ ಉಮೇಶ್ ಮತ್ತು ಉಪನಿರ್ದೇಶಕ ಗಣೇಶ್ ಉಪಸ್ಥಿತರಿದ್ದರು. ಕ್ರೀಡಾಕೂಟಕ್ಕೆ 15 ಜಿಲ್ಲೆಗಳಿಂದ 30 ತಂಡಗಳು ಭಾಗವಹಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.