ADVERTISEMENT

ಸೂರ್ಯಕಾಂತಿಗೆ ರೈತರ ವಿದಾಯ

ಹವಾಮಾನ, ಪಕ್ಷಿಗಳ ಉಪಟಳದಿಂದ ಬೇಸತ್ತ ಅನ್ನದಾತ: ಪರ್ಯಾಯ ಬೆಳೆಯತ್ತ ಚಿತ್ತ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 6:06 IST
Last Updated 11 ಜುಲೈ 2025, 6:06 IST
ಕಳೆದ ವರ್ಷ ಜಾವಗಲ್ ಗ್ರಾಮದ ಅತ್ತಿಗುಡ್ಡ ಕಾವಲಿನ ಬಳಿ ರೈತರು ಬೆಳೆದಿರುವ ಸೂರ್ಯಕಾಂತಿ ಬೆಳೆಯನ್ನು, ಗ್ರಾಮದ ರೈತಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸುಬ್ರಹ್ಮಣ್ಯ ವೀಕ್ಷಿಸಿದ್ದರು. (ಸಂಗ್ರಹ ಚಿತ್ರ)
ಕಳೆದ ವರ್ಷ ಜಾವಗಲ್ ಗ್ರಾಮದ ಅತ್ತಿಗುಡ್ಡ ಕಾವಲಿನ ಬಳಿ ರೈತರು ಬೆಳೆದಿರುವ ಸೂರ್ಯಕಾಂತಿ ಬೆಳೆಯನ್ನು, ಗ್ರಾಮದ ರೈತಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸುಬ್ರಹ್ಮಣ್ಯ ವೀಕ್ಷಿಸಿದ್ದರು. (ಸಂಗ್ರಹ ಚಿತ್ರ)   

ಜಾವಗಲ್: ಹೋಬಳಿಯಲ್ಲಿ ವರ್ಷದಿಂದ ವರ್ಷಕ್ಕೆ ಸೂರ್ಯಕಾಂತಿ ಬಿತ್ತನೆ ಮಾಡುವ ರೈತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಸೂರ್ಯಕಾಂತಿ ಬದಲಿಗೆ ರೈತರು ವಾಣಿಜ್ಯ ಬೆಳೆಗಳನ್ನು ಒಳಗೊಂಡಂತೆ ಇನ್ನಿತರ ಪಾರಂಪರಿಕ ಬೆಳೆಗಳ ಮೊರೆ ಹೋಗುತ್ತಿದ್ದಾರೆ. ಇದರ ಪರಿಣಾಮ ಈ ವರ್ಷ ಸಂಪೂರ್ಣವಾಗಿ ರೈತರು ಸೂರ್ಯಕಾಂತಿ ಬಿತ್ತನೆ ವಿದಾಯ ಹೇಳಿದಂತಾಗಿದೆ.

ಹತ್ತಾರು ವರ್ಷಗಳ ಹಿಂದೆ ಜಾವಗಲ್ ಹೋಬಳಿಯಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತಿದ್ದ ಸೂರ್ಯಕಾಂತಿ ಬೆಳೆ, ಮಳೆಯ ಅಭಾವ, ಪಕ್ಷಿಗಳ ಉಪಟಳ ಹಾಗೂ ಇನ್ನಿತರ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತ ಬರುತ್ತಿದೆ.ಈ ವರ್ಷ ಮುಂಗಾರು ಹಂಗಾಮು ಆರಂಭವಾಗಿ ಒಂದು ತಿಂಗಳು ಕಳೆದರೂ ಕೂಡ ಜಾವಗಲ್ ಹೋಬಳಿ ವ್ಯಾಪ್ತಿಯ ಗ್ರಾಮಗಳ ರೈತರು ಈವರೆಗೂ ಸೂರ್ಯಕಾಂತಿ ಬಿತ್ತನೆ ಮಾಡಿಲ್ಲ.

ಮೂರು ವರ್ಷಗಳ ಅವಧಿಯಲ್ಲಿ ಹೋಬಳಿಯ ವಿವಿಧಡೆ ಅಲ್ಪ ಪ್ರಮಾಣದಲ್ಲಿ ಸೂರ್ಯಕಾಂತಿ ಬಿತ್ತನೆಯಾದರೂ, ಸರಿಯಾದ ಸಮಯಕ್ಕೆ ಕಾಳು ಕಟ್ಟದಿರುವುದು ಹಾಗೂ ಇನ್ನಿತರ ಹವಾಮಾನ ವೈಪರಿತ್ಯಗಳಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಹಾಗಾಗಿ ಈ ಬಾರಿ ರೈತರು ಸೂರ್ಯಕಾಂತಿ ಬಿತ್ತನೆಗೆ ಹಿಂದೇಟು ಹಾಕಿದ್ದು, ವಾಣಿಜ್ಯ ಬೆಳೆಗಳ ಜೊತೆಗೆ ಉದ್ದು, ಮುಸುಕಿನ ಜೋಳ, ಅಲಸಂದೆ, ಹತ್ತಿ ಬೆಳೆಯ ಮೊರೆ ಹೋಗಿದ್ದಾರೆ.

ADVERTISEMENT

ಕೊಳವೆ ಬಾವಿಗಳ ಮೂಲಕ ನೀರಿನ ವ್ಯವಸ್ಥೆ ಹೊಂದಿರುವ ಹಲವು ರೈತರು ತಮ್ಮ ಜಮೀನುಗಳನ್ನು ಶುಂಠಿ ಹಾಗೂ ದಾಳಿಂಬೆ ಬೆಳೆಯುವ ರೈತರಿಗೆ ವರ್ಷಕ್ಕೆ ಇಂತಿಷ್ಟು ಹಣ ಪಡೆದು ಗುತ್ತಿಗೆ ಆಧಾರದಲ್ಲಿ ತಮ್ಮ ಜಮೀನುಗಳನ್ನು ನೀಡುತ್ತಿದ್ದಾರೆ. ಮತ್ತೊಂದೆಡೆ ರಾಗಿಗೆ ಬೆಂಬಲ ಬೆಲೆ ನೀಡುತ್ತಿರುವುದರಿಂದ ನೀರಾವರಿ ವ್ಯವಸ್ಥೆ ಹೊಂದಿಲ್ಲದ ರೈತರು ಹೆಚ್ಚಾಗಿ ರಾಗಿ ಬಿತ್ತನೆಗೆ ಆಸಕ್ತಿ ತೋರುತ್ತಿದ್ದಾರೆ.

ಪ್ರಸ್ತುತ ವರ್ಷವೇ ರೈತರು ಸೂರ್ಯಕಾಂತಿ ಬಿತ್ತನೆಗೆ ಸಂಪೂರ್ಣವಾಗಿ ನಿರಾಸಕ್ತಿ ತೋರುತ್ತಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜಾವಗಲ್ ಭಾಗದಲ್ಲಿ ಹಿಂದೊಮ್ಮೆ ಸೂರ್ಯಕಾಂತಿಯನ್ನು ಬೆಳೆಯುತ್ತಿದ್ದರು ಎಂಬುದನ್ನು ಮುಂಬರುವ ಪೀಳಿಗೆಗೆ ಕಥೆಯ ರೂಪದಲ್ಲಿ ವ್ಯಕ್ತಪಡಿಸಬೇಕಾದ ಪರಿಸ್ಥಿತಿ ಬಂದರು ಅಚ್ಚರಿಪಡಬೇಕಾಗಿಲ್ಲ ಎಂಬುದು ಗ್ರಾಮದ ಹಿರಿಯ ರೈತರ ಮಾತು.

ಈಗಲಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಭಾಗದಲ್ಲಿ ಸೂರ್ಯಕಾಂತಿ ಬಿತ್ತನೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಸೂರ್ಯಕಾಂತಿ ಬಿತ್ತನೆ ಮಾಡುವಂತೆ ರೈತರನ್ನು ಪ್ರೋತ್ಸಾಹಿಸಬೇಕು. ಬಿತ್ತನೆಗೆ ಇರುವ ತೊಡಕುಗಳನ್ನು ನಿವಾರಿಸಲು ಶ್ರಮಿಸಬೇಕು ಎಂಬುದು ರೈತರ ಬೇಡಿಕೆ.

ರಾಗಿ ಬೀಜಕ್ಕೆ ಹೆಚ್ಚಿದ ಬೇಡಿಕೆ

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಮುಂಗಾರು ಆರಂಭವಾಗಿ ಒಂದು ತಿಂಗಳು ಕಳೆಯುತ್ತಾ ಬಂದರು ಕೂಡ ಜಾವಗಲ್ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಈವರೆಗೂ ಯಾವೊಬ್ಬ ರೈತರೂ ಸೂರ್ಯಕಾಂತಿ ಬಿತ್ತನೆ ಬೀಜವನ್ನು ಖರೀದಿ ಮಾಡಿಲ್ಲ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸುಬ್ರಹ್ಮಣ್ಯ ತಿಳಿಸಿದರು. ಸೂರ್ಯಕಾಂತಿ ಬೆಳೆಯಿಂದ ಸತತವಾಗಿ ನಷ್ಟ ಅನುಭವಿಸಿದ ರೈತರು ಈಗ ರಾಗಿ ಬಿತ್ತನೆಯ ಕಡೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದು ಈಗಾಗಲೇ ಗ್ರಾಮದ ರೈತ ಸಂಪರ್ಕ ಕೇಂದ್ರದ ಮೂಲಕ 30 ಟನ್ ರಾಗಿ ಬೀಜ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು 50 ಟನ್ ವಿತರಣೆ ಗುರಿ ಹೊಂದಿದ್ದು ಒಟ್ಟಾರೆ ಗ್ರಾಮದ ರೈತ ಸಂಪರ್ಕ ಕೇಂದ್ರದ ಮೂಲಕ 80 ಟನ್ ರಾಗಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.